ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ, ಕೆ ಗುಡಿಯಲ್ಲಿ ಸಫಾರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಅದರಲ್ಲೂ ಜಿಪ್ಸಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ಬಂಡೀಪುರ, ಕೆ ಗುಡಿಯಲ್ಲಿ ಸಫಾರಿ ವೀಕ್ಷಣೆಗೆ ಬೆಳಗ್ಗೆಯಿಂದಲೆ ಜನರು ಮುಗಿಬಿದ್ದಿದ್ದಾರೆ. ಅದರಲ್ಲೂ ಮಿನಿ ಬಸ್ನಲ್ಲಿ ಸಫಾರಿ ವೀಕ್ಷಣೆಗೆ ತೆರಳುವ ಬದಲೂ ಜಿಪ್ಸಿ ವಾಹನಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಜಿಪ್ಸಿ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಬೇಡಿಕೆಗೆ ಸ್ಪಂದಿಸಲು ಅರಣ್ಯ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ.
ಅಲ್ಲದೆ ಮುಂದಿನ ವರ್ಷದ ಜನವರಿ 5ರವರೆಗೆ ಕೂಡ ಮುಂಗಡವಾಗಿ ಜಿಪ್ಸಿಯನ್ನು ಬುಕ್ ಮಾಡಲಾಗಿದೆ. ಇದರಿಂದ ಕೆಲವರು ನಿರಾಸೆಗೆ ಒಳಗಾಗಿದ್ದು, ಹೇಗದರೂ ಮಾಡಿ ಜಿಪ್ಸಿ ಸಿಕ್ಕಿದರೆ ಸಾಕಪ್ಪಾ ಎಂದು ಹೇಳುತ್ತಿದ್ದಾರೆ.
ಇತ್ತ ಜಿಲ್ಲೆಯಲ್ಲಿ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರ ಸಂರಕ್ಷಿತಾರಣ್ಯವನ್ನು ಒಳಗೊಂಡಿದೆ. ಈ ಮೂರು ಕೂಡ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.