ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ವಿಶೇಷ ಪ್ರವಾಸವನ್ನು ಆಯೋಜಿಸಿದೆ.
ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಕೈಗೆಟಕುವ ದರದಲ್ಲಿ ನಂದಿಬೆಟ್ಟ ಮತ್ತು ಮೈಸೂರು, ಹಾಸನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಿಗೆ ಪ್ರವಾಸವನ್ನು ಆಯೋಜಿಸಿದೆ. ಏಪ್ರಿಲ್ 1ರಿಂದ ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
1.ಬೆಂಗಳೂರು-ದೇವನಹಳ್ಳಿ-ನಂದಿಬೆಟ್ಟ ಪ್ರವಾಸ: ಒಂದು ದಿನದ ಪ್ರವಾಸವಾಗಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ಈ ಪ್ರವಾಸವನ್ನು ಆಯೋಜಿಸಲಾಗುತ್ತಿದೆ. ಈ ಪ್ರವಾಸವು ಬೆಳಿಗ್ಗೆ 8 ಗಂಟೆಗೆ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ನಿರ್ಗಮಿಸಿ ದೇವನಹಳ್ಳಿ ಕೋಟೆ-ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಜನ್ಮಸ್ಥಳ-ನಂದಿಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಸಾಯಂಕಾಲ 5 ಗಂಟೆವರೆಗೆ ನಂದಿಬೆಟ್ಟದ ವೀಕ್ಷಣೆ ಮಾಡುವ ವ್ಯವಸ್ಥೆ ಇರುತ್ತದೆ. ಈ ಪ್ರವಾಸದ ದರವು ಪ್ರತಿಯೊಬ್ಬರಿಗೆ ಊಟದ ವ್ಯವಸ್ಥೆ ಸೇರಿ 700 ರೂ. ಆಗಿರುತ್ತದೆ.
2.ಬೆಂಗಳೂರು-ಮೈಸೂರು-ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ-ಪ್ರವಾಸ: ಇದು 2 ದಿನಗಳ ಪ್ರವಾಸವಾಗಿದ್ದು, ಮೊದಲನೆ ದಿನ ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಟು ಶ್ರೀರಂಗಪಟ್ಟಣ-ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆ.ಆರ್ ಸಾಗರ ವೀಕ್ಷಣೆ ಮತ್ತು ಕೆ.ಆರ್ ಸಾಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡನೇ ದಿನ ಬೆಳಿಗ್ಗೆ ಕೆ.ಆರ್ ಸಾಗರದಿಂದ ಹೊರಟು ಶ್ರವಣಬೆಳಗೊಳ-ಬೇಲೂರು-ಹಳೇಬೀಡು-ಬೆಳವಾಡಿ ವೀರನಾರಾಯಣಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡುವ ವ್ಯವಸ್ಥೆ ಇದೆ. ಈ ಪ್ರವಾಸದ ದರವು ಊಟದ ವ್ಯವಸ್ಥೆ ಸೇರಿ ಪ್ರತಿಯೊಬ್ಬರಿಗೆ 1,900 ರೂ. ಆಗಿದೆ.
ಪ್ರವಾಸಿಗರು ಇದೇ ರೀತಿ ಮುಂಬರುವ ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿಗಮದಿಂದ ಮೈಸೂರು-ಊಟಿ-ಕೊಡೆಕೆನಾಲ್-ಕೊಡಗಿನ ಪ್ರವಾಸಿ ಸ್ಥಳಗಳಿಗೆ ಬೇಡಿಕೆಗೆ ಅನುಗುಣವಾಗಿ ಪ್ರವಾಸಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆಯಲು, ಬುಕ್ಕಿಂಗ್ ಗಾಗಿ
www.kstdc.co ವೆಬ್ ಸೈಟ್ ಹಾಗೂ ದೂರವಾಣಿ ಸಂಖ್ಯೆ – 89706 50070, 080-43344334 ಸಂಪರ್ಕಿಸಬಹುದಾಗಿದೆ.