ಶ್ರೀನಗರ: ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ಎಫ್) ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಪೊಂಬೆ ಮತ್ತು ಗೋಪಾಲ್ಪೋರಾ ಗ್ರಾಮಗಳಲ್ಲಿ ಬುಧವಾರ ನಡೆದಿದೆ.
ಗೋಪಾಲ್ಪೋರಾ ಗ್ರಾಮಗಳಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಟಿಆರ್ಎಫ್ ಕಮಾಂಡರ್ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ. ಪೊಂಬೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದರೆ, ಗೋಪಾಲ್ಪೋರಾದಲ್ಲಿ ಇಬ್ಬರು ಹತರಾಗಿದ್ದಾರೆ. ಇದನ್ನೂ ಓದಿ: ಚೀನಾ ಗಡಿ ಕ್ಯಾತೆ ನಡುವೆ ಭಾರತೀಯ ಸೇನೆಯಿಂದ ಆಪರೇಷನ್ ಹರ್ಕ್ಯುಲಸ್
ಗೋಪಾಲ್ಪೋರಾ ಪ್ರದೇಶದಲ್ಲಿ ಉಗ್ರಗಾಮಿಗಳು ಇರುವ ಖಚಿತ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ, ಅವರು ಪ್ರತಿದಾಳಿ ನಡೆಸಿದರು. ಈ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.
ಟಿಆರ್ಎಫ್ ಉಗ್ರಗಾಮಿ ಕಮಾಂಡರ್ ಅಫಾಕ್ ಸಿಕಂದರ್ ಲೋನ್ ಮತ್ತು ಮತ್ತೊಬ್ಬ ಟಿಆರ್ಎಫ್ ಸದಸ್ಯ ಇರ್ಫಾನ್ ಮುಸ್ತಾಕ್ ಲೋನ್ನನ್ನು ಗೋಪಾಲ್ಪೋರಾದಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ ಮಾಡಿವೆ. ಈ ಕುರಿತು ಪೊಲೀಸ್ ಮಹಾನಿರೀಕ್ಷಕ(ಕಾಶ್ಮೀರ) ವಿಜಯ್ ಕುಮಾರ್ ಟ್ವೀಟ್ನಲ್ಲಿ, ನಿಷೇಧಿತ ಭಯೋತ್ಪಾದಕ ಸಂಘಟನೆಯ ಟಿಆರ್ಎಫ್ನ ಭಯೋತ್ಪಾದಕ ಕಮಾಂಡರ್ ಅಫಾಕ್ ಸಿಕಂದರ್ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 4ಜಿ ಡೌನ್ಲೋಡ್ ವೇಗದಲ್ಲಿ ಜಿಯೋ ಫಸ್ಟ್
ಇದಲ್ಲದೆ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಇಬ್ಬರು ಸಕ್ರಿಯ ಭಯೋತ್ಪಾದಕ ಸಹಚರರನ್ನು ಹಾಗೂ ಪುಲ್ವಾಮಾ ನಿವಾಸಿ ಅಮೀರ್ ಬಶೀರ್ ದಾರ್, ಶೋಪಿಯಾನ್ ನಿವಾಸಿ ಮುಖ್ತಾರ್ ಅಹ್ಮದ್ ಭಟ್ ಅವರನ್ನು ಪಡೆಗಳು ಬಂಧಿಸಿವೆ. ಅವರ ಬಳಿಯಿದ್ದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.