ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯೊಡೆದ ಪರಿಣಾಮ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಗೇಟ್ ಬಳಿ ನಡೆದಿದೆ.
ಮೃತರನ್ನು ನರಸಿಂಹರಾಜ್(56) ಹಾಗೂ ಕಿರಣ್(23) ಎಂದು ಗುರುತಿಸಲಾಗಿದೆ. ಮೃತ ಕಿರಣ್ಗೆ ಹೊಸದಾಗಿ ಕೆಲಸ ಸಿಕ್ಕಿತ್ತು. ನಾಳೆ(ಸೋಮವಾರ) ಕಿರಣ್ ಮೊದಲ ದಿನದ ಕೆಲಸಕ್ಕೆ ಹೋಗಬೇಕಿತ್ತು. ಈ ಹಿನ್ನೆಲೆ ನರಸಿಂಹರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಪೂಜೆ ಮಾಡಿಸಿಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲವೆಂದು ಪತ್ನಿಯನ್ನ ಕೊಂದು ಬಾತ್ರೂಮ್ನಲ್ಲಿ ಬಚ್ಚಿಟ್ಟ
ಮೃತರು ಮೂಲತಃ ಬೆಂಗಳೂರಿನ ರಾಜಾಜಿನಗರದವರು. ನಾಳೆಯಿಂದ ಮಗ ಕೆಲಸಕ್ಕೆ ಹೋಗುತ್ತಾನೆ ಎಂದು ನರಸಿಂಹರಾಜ್ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದಿದ್ದರು. ಪೂಜೆ ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂಭವಿಸುತ್ತಿದ್ದಂತೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಿರಣ್ ತಂದೆ ನರಸಿಂಹರಾಜ್ ಸ್ಥಿತಿ ಗಂಭೀರವಾಗಿದ್ದ ಪರಿಣಾಮ ಹಾಸನದ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಬೇಲೂರು ಬಳಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮೃತದೇಹವನ್ನು ಮೂಡಿಗೆರೆಗೆ ವಾಪಸ್ ತಂದಿದ್ದಾರೆ.
ಕಾರಿನಲ್ಲಿದ್ದ ತಾಯಿ ಭಾರತಿ(52) ಹಾಗೂ ಪ್ರೇರಣಾ(19) ಸ್ಥಿತಿ ಗಂಭೀರವಾಗಿದೆ. ಪ್ರೇರಣಾಳ ಕೈ ಹಾಗೂ ಕಾಲಿನ ಮೂಳೆ ಮುರಿದು ಹೋಗಿದೆ ಎಂದು ಹೇಳಲಾಗಿದೆ. ಅವರಿಬ್ಬರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೋಮು ಗಲಭೆ ಸೃಷ್ಟಿಸುವ ಪೋಸ್ಟ್ ಹಾಕಿದ ಹಿರಿಯ ಸರ್ಕಾರಿ ಅಧಿಕಾರಿ ಅರೆಸ್ಟ್
ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೂಡಿಗೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.