ಬೆಂಗಳೂರು: ಟೊಮೆಟೊ (Tomato) ಬೆಲೆ ಗಗನಕ್ಕೇರಿದ್ದೇ ತಡ, ಟೊಮೆಟೊ ಗಾಡಿಯನ್ನೇ ಎಸ್ಕೇಪ್ ಮಾಡಿರುವಂತಹ ಘಟನೆ ಯಶವಂತಪುರದ ಆರ್ಎಂಸಿ ಯಾರ್ಡ್ನಲ್ಲಿ (RMC Yard) ನಡೆದಿದೆ. ಖದೀಮರು ಗಾಡಿ ಸಮೇತ ಸುಮಾರು 250ಕ್ಕೂ ಹೆಚ್ಚು ಟ್ರೇಗಳಲ್ಲಿದ್ದ ಟೊಮೆಟೊವನ್ನು ಹೇಗೆ ಹೈಜಾಕ್ ಮಾಡಿ ಕೊಂಡೊಯ್ದರು ಎಂದು ಅದೇ ಗಾಡಿಯ ಚಾಲಕ ಶಿವಣ್ಣ ವಿವರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ, ನಾವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕೋಲಾರಕ್ಕೆ ಟೊಮೆಟೊ ಸಾಗಿಸುತ್ತಿದ್ದೆವು. ಸುಮಾರು 2 ಟನ್ ತೂಗುವಷ್ಟು ಟೊಮೆಟೊ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದೆವು. ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆಗೆ ರಿಂಗ್ ರಸ್ತೆಯಲ್ಲಿ ಅಪಘಾತ ನಡೆಯಿತು.
ಈ ವೇಳೆ ನಮ್ಮ ವಾಹನದಲ್ಲಿದ್ದ ಇಬ್ಬರು ಕೆಳಗೆ ಇಳಿದೆವು. ಆಗ ಕಾರಿನಲ್ಲಿದ್ದ ನಾಲ್ವರು ಗಲಾಟೆ ಮಾಡಿದರು. ಗಾಡಿ ಗುದ್ದಿದ್ದಕ್ಕೆ ಅವರು 10 ಸಾವಿರ ಹಣ ಕೊಡುವಂತೆ ಗಲಾಟೆ ಮಾಡಿದರು. ಆದರೆ ನಮ್ಮ ಹತ್ರ ಅಷ್ಟು ಹಣ ಇಲ್ಲ ಎಂದ್ವಿ. ಬಳಿಕ ಅವರು ನಮ್ಮನ್ನು ಕಾರಿನಲ್ಲಿ ಕೂರಿಸಿಕೊಂಡು ಬುದಿಗೆರೆ ರಸ್ತೆಗೆ ಕರೆದುಕೊಂಡು ಹೋದರು. ಅಲ್ಲಿನ ಖಾಲಿ ಜಾಗದಲ್ಲಿ ನಮ್ಮನ್ನು ಇಳಿಸಿ, ಟೊಮೆಟೊ ವಾಹನದ ಸಮೇತ ಅವರು ಎಸ್ಕೇಪ್ ಆಗಿದ್ದಾರೆ ಎಂದು ಚಾಲಕ ಶಿವಣ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ನಡುವೆ 2 ಟನ್ ಟೊಮೆಟೊವಿದ್ದ ವಾಹನವನ್ನೇ ಕದ್ದ ಕಳ್ಳರು
ಘಟನೆಗೆ ಸಂಬಂಧಿಸಿದಂತೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೆ ಭಾರೀ ಮಳೆ ಸಾಧ್ಯತೆ
Web Stories