ಚಿಕ್ಕಮಗಳೂರು: ಇಂದು ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಶಾರದಾಂಭೆ ಹಾಗೂ ಹೊರನಾಡು ಅನ್ನಪೂಣೇಶ್ವರಿ ದೇವಾಲಯದ ಪೂಜಾ ವಿಧಿ-ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಎಂದಿನಂತೆ ಪೂಜಾ-ಕೈಂಕರ್ಯಗಳು ನಡೆಯಲಿದ್ದು, ಬರುವ ಭಕ್ತರಿಗೆ ದೇವಿಯ ದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಇಂದು ಮಧ್ಯಾಹ್ನ 2 ಗಂಟೆಯ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಚಂದ್ರ ಗ್ರಹಣದ ಆರಂಭದ ಕ್ಷಣದಿಂದ ಗ್ರಹಣ ಸಂಪೂರ್ಣವಾಗಿ ಬಿಡುವ ಕ್ಷಣದವರೆಗೂ ಹೊರನಾಡಿನಲ್ಲಿ ಜಗನ್ಮಾತೆ ಅನ್ನಪೂರ್ಣೇಶ್ವರಿ ದೇವಿಗೆ ನಿರಂತರ ಜಲ ಅಭಿಷೇಕ ನಡೆಯಲಿದ್ದು, ಗ್ರಹಣ ಮೋಕ್ಷಗೊಂಡ ಬಳಿಕ ವಿಶೇಷ ಪೂಜೆ ನಡೆಯಲಿದೆ.
ಶೃಂಗೇರಿಯಲ್ಲೂ ಶಕ್ತಿದೇವತೆಯ ದರ್ಶನದ ಅವಕಾಶಕ್ಕೆ ಯಾವುದೇ ಅಡಚಣೆ ಇಲ್ಲ. ಎಂದಿನಂತೆ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಮಧ್ಯಾಹ್ನ 2.30ರ ನಂತರ ಊಟದ ವ್ಯವಸ್ಥೆ ಇರುವುದಿಲ್ಲ. ಗ್ರಹಣದ ಆರಂಭದ ಕಾಲದಲ್ಲಿ ಶೃಂಗೇರಿ ಶಾರದಾಂಭೆಗೆ ವಿಶೇಷ ಪೂಜೆ ನಡೆಯಲಿದ್ದು, ಗ್ರಹಣ ಸಂಪೂರ್ಣ ಮುಕ್ತಾಯಗೊಂಡ ಬಳಿಕವೂ ವಿಶೇಷ ಪೂಜೆ ನಡೆಯಲಿದೆ. ಬರುವ ಭಕ್ತರಿಗೆ ಪೂಜೆ ಮಾಡಿಸುವುದಕ್ಕಾಗಲಿ, ದೇವಿಯ ದರ್ಶನ ಮಾಡುವುದಕ್ಕಾಗಲಿ ಯಾವುದೇ ತೊಂದರೆ ಇಲ್ಲ ಎಂದು ಎರಡೂ ದೇವಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಇಂದು ರಾತ್ರಿ 11.44ರಿಂದ ನಸುಕಿನ ಜಾವ 3.49ರರೆಗೂ ಚಂದ್ರಗ್ರಹಣ ಇರಲಿದ್ದು, ಇದನ್ನು ಶತಮಾನದ ಸುದೀರ್ಘ ಚಂದ್ರ ಗ್ರಹಣ ಎಂದೇ ಬಣ್ಣಿಸಲಾಗಿದೆ. ಈ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಕೆಂಬಣ್ಣಕ್ಕೆ ತಿರುಗಲಿದೆ. ಹೀಗಾಗಿ ಇದನ್ನ ರಕ್ತಚಂದ್ರಗ್ರಹಣ ಎಂದು ಬಿಂಬಿಸಲಾಗ್ತಿದೆ. ಗ್ರಹಣದ ವೇಳೆ ಮಂಗಳ ಗ್ರಹ ಭೂಮಿಗೆ ನಿಕಟವಾಗಲಿದ್ದು, ಬುಧ ಗ್ರಹ ತನ್ನ ಕಕ್ಷೆಯಿಂದ ದೂರ ಸರಿಯಲಿದೆ. ಇದು ಖಗೋಳದ ಈ ಸಜಹ ಪ್ರಕ್ರಿಯೆ ಅಂತ ಗೊತ್ತಿದ್ದರೂ ಜನರಲ್ಲಿ ಆತಂಕ ಮನೆ ಮಾಡಿದೆ. ಇದರಿಂದ ಕೆಡುಕುಂಟಾಗುತ್ತೆ ಅಂತ ಭಯಗೊಂಡಿದ್ದಾರೆ.