ಕನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ ಕೆಲವು ವರ್ಷಗಳಿಂದ ಸಿನಿಮಾ ರಂಗದಿಂದಲೇ ದೂರವಾಗಿದ್ದರು. ಓದಿನ ಕಡೆ ಗಮನ ಕೊಟ್ಟಿದ್ದ ಪೂಜಾ ಇದೀಗ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಅವರು, ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಿದ್ದರು ಅದೇ ರೀತಿಯಾಗಿ ಡಿಸೆಂಬರ್ 4ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಚೌಟ್ರಿಯಲ್ಲಿ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮದುವೆಯಾಗಿಯೇ ವಿಶೇಷ ಪ್ರೊಮೋ ಒಂದನ್ನು ಅವರು ರೆಡಿ ಮಾಡಿದ್ದು, ಅಲ್ಲಿ ಆರತಕ್ಷತೆ ಮತ್ತು ಮದುವೆಯ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ತಮ್ಮೆಲ್ಲರ ಹಾರೈಕೆ ಹೊಸ ಜೋಡಿಗೆ ಇರಲಿ ಎಂದು ಅವರು ಕೇಳಿಕೊಂಡಿದ್ದಾರೆ. ಸಿನಿಮಾ ರಂಗದಿಂದ ದೂರವಾಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪ್ರೇಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ತಿಥಿ ಸಿನಿಮಾದ ಕಾವೇರಿಗೂ ಕಂಕಣ ಭಾಗ್ಯ ಎಂದು ಅಭಿಮಾನಿಗಳು ಶುಭ ಹಾರೈಸಿದ್ದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್ನಲ್ಲಿ ತಮಿಳು ನಟ ವಿಜಯ್ ಸೇತುಪತಿ
ತಿಥಿ ಸಿನಿಮಾ ಬಂದಾಗ ದಿಢೀರ್ ಅಂತ ಪೂಜಾ ಫೇಮಸ್ ಆದರು. ಕುರಿ ಕಾಯುವ ಕಾವೇರಿಯ ಪಾತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದರು. ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಬಂತು. ಅಲ್ಲಿಂದ ಹಲವು ಸಿನಿಮಾಗಳಲ್ಲೂ ನಟಿಸಿದರು. ನಂತರ ಸಿನಿಮಾ ರಂಗದಿಂದ ದೂರವಾದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಯೂ ಆಗಿತ್ತು. ಇದೀಗ ಪ್ರೇಮ್ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದು, ಡಿಸೆಂಬರ್ 3 ಮತ್ತು 4 ರಂದು ಈ ಜೋಡಿ ಹಸೆಮಣೆ ಏರುತ್ತಿದ್ದಾರೆ.