ಮುಂಬೈ: ಮಹಿಳೆಯನ್ನ ಚಾಕುವಿನಿಂದ ಇರಿದು ಕೊಂದು ಆಕೆಯ ರಕ್ತದಲ್ಲಿ “ಈಕೆಯಿಂದ ಬೇಸತ್ತು ಹೋಗಿದ್ದೇನೆ, ನನ್ನನ್ನು ಹಿಡಿದು ಗಲ್ಲಿಗೇರಿಸಿ ಎಂದು ಬರೆದು ಕೊನೆಯಲ್ಲಿ ಸ್ಮೈಲಿಯನ್ನೂ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ 21 ವರ್ಷದ ಮಗನನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇಶದಲ್ಲಿ ಭಾರೀ ಸುದ್ದಿಯಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣವನ್ನ ಮೊದಲಿಗೆ ತನಿಖೆ ಮಾಡಿದ್ದ ಮುಂಬೈನ ಪೊಲೀಸ್ ಅಧಿಕಾರಿ ಧ್ಯಾನೇಶ್ವರ್ ಗಾನೋರ್ ಅವರ ಪತ್ನಿ ದೀಪಾಲಿ ಕೊಲೆಯಾದ ಮಹಿಳೆ. ಬುಧವಾರದಂದು ದೀಪಾಲಿ ಮುಂಬೈನ ಸಾಂಟಾಕ್ರೂಜ್ನಲ್ಲಿರೋ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಧ್ಯಾನೇಶ್ವರ್ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ ಹೆಂಡತಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ನೋಡಿದ್ದರು. ಅಲ್ಲದೆ ಶವದ ಪಕ್ಕದಲ್ಲಿ ಆಕೆಯದ್ದೇ ರಕ್ತದಿಂದ ಬರೆದ ಸಂದೇಶ ಕೂಡ ಇತ್ತು. ಈಕೆಯಿಂದ ಬೇಸತ್ತು ಹೋಗಿದ್ದೇನೆ, ನನ್ನನ್ನು ಹಿಡಿಯಿರಿ, ಗಲ್ಲಿಗೇರಿಸಿ ಎಂಬ ಸಾಲುಗಳ ಜೊತೆ ಕೊನೆಯಲ್ಲಿ ಸ್ಮೈಲಿ ಫೇಸ್ ಕೂಡ ಬರೆಯಲಾಗಿತ್ತು. ಇದರಿಂದ ಪೊಲೀಸರೇ ಬೆಚ್ಚಿ ಬಿದ್ದಿದ್ದರು.
ದೀಪಾಲಿ ಕೊಲೆಯಾದ ದಿನದಿಂದ ಅವರ 21 ವರ್ಷದ ಮಗ ಸಿದ್ಧಾಂತ್ ಕಾಣೆಯಾಗಿದ್ದ. ಹೀಗಾಗಿ ಈತನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ರು. ಸಿದ್ಧಾಂತ್ ಜೈಪುರಕ್ಕೆ ಪರಾರಿಯಾಗಿದ್ದಾನೆಂದು ತಿಳಿದು ಅಧಿಕಾರಿಗಳು ಕೂಡಲೇ 3 ಪೊಲೀಸರ ತಂಡವನ್ನ ಅಲ್ಲಿಗೆ ಕಳಿಸಿದ್ರು. ಆದ್ರೆ ಪೊಲೀಸರ ತಂಡ ಜೈಪುರ್ಗೆ ಹೋಗುವ ವೇಳೆಗೆ ಸಿದ್ಧಾಂತ್ ಜೋಧ್ಪುರಕ್ಕೆ ಹೋಗಿದ್ದ. ನಂತರ ಪೊಲೀಸರು ಸಿದ್ಧಾಂತ್ನ ಫೋಟೋವನ್ನ ಜೋಧ್ಪುರ್ ಪೊಲೀಸರೊಂದಿಗೆ ಹಂಚಿಕೊಂಡಿದ್ದು, ಅಲ್ಲಿ ಸಿದ್ಧಾಂತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಆತನನ್ನು ಮುಂಬೈಗೆ ಕರೆತರಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ರಶ್ಮಿ ಕಾರಂಡಿಕ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ಸಿದ್ಧಾಂತ್ನನ್ನು ಇನ್ನೂ ಆರೋಪಿಯಾಗಿ ಮಾಡುವುದು ಬಾಕಿ ಇದೆ. ಎಫ್ಐಆರ್ನಲ್ಲಿ ಇನ್ನೂ ಅಪರಿಚಿತ ವ್ಯಕ್ತಿಗಳಿಂದ ಕೊಲೆ ಎಂದೇ ಇರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.