ಮಡಿಕೇರಿ: ವಿವಾದಾತ್ಮಕ ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ನಿಷೇಧ ಮಾಡುತ್ತಿದ್ದಂತೆ ಕೊಡಗಿನಲ್ಲಿ ಸಂಪೂರ್ಣ ಶಾಂತಿ ನೆಲೆಸಿದೆ.
ಕಳೆದ ನಾಲ್ಕು ವರ್ಷಗಳಿಂದ ನವೆಂಬರ್ 10 ಎಂದರೆ ಒಂದು ರೀತಿಯ ಆತಂಕ, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುತಿತ್ತು. ಆದರೆ ಈ ಬಾರಿ ಸರ್ಕಾರ ಟಿಪ್ಪು ಜಯಂತಿಯನ್ನು ಸರ್ಕಾರ ನಿಷೇಧಿಸಿದ್ದರಿಂದ ಕೊಡಗಿನಲ್ಲಿ ಖಾಸಗಿಯಾಗಿಯೂ ಟಿಪ್ಪು ಜಯಂತಿಯನ್ನು ಆಚರಿಸದಂತೆ ಜಿಲ್ಲಾಡಳಿತ ನಿಷೇಧ ಮಾಡಿದೆ.
ಪೊಲೀಸ್ ಇಲಾಖೆ ಜಿಲ್ಲೆಯಾದ್ಯಂತ ಸಂಪೂರ್ಣ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಆಯಕಟ್ಟಿನ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದು, ಮಡಿಕೇರಿ ನಗರಾದ್ಯಂತ ಖಾಕಿ ಕಣ್ಗಾವಲು ಇದೆ. ಹೀಗಾಗಿ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸಿದ್ದು, ಸಹಜ ಸ್ಥಿತಿಯಲ್ಲಿದೆ.
ಮತ್ತೊಂದೆಡೆ 2015 ರಲ್ಲಿ ಟಿಪ್ಪುಜಯಂತಿ ಸಂದರ್ಭ ಮೃತಪಟ್ಟ ಹಿಂದೂ ಸಂಘಟನೆ ಕಾರ್ಯಕರ್ತ ಕುಟ್ಟಪ್ಪ ಅವರ ಸ್ಮರಣಾರ್ಥ ಮಡಿಕೇರಿಯಲ್ಲಿ ವಿಶೇಷ ಪೂಜೆ ನಡೆಯಿತು. ಮಡಿಕೇರಿಯ ಓಂಕಾರೇಶ್ವರ ದೇವಾಯಲಕ್ಕೆ ತೆರಳಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವಿಶೇಷ ಪೂಜೆ, ಅರ್ಚನೆ ಮಾಡಿಸಿ ಪ್ರಸಾದ ಹಂಚಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ನರಸಿಂಹ ಟಿಪ್ಪು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.