ವಿಜಯಪುರ: ಟಿಪ್ಪು ಪಠ್ಯದ ಕುರಿತು ಮೈಸೂರು ಮಹಾರಾಜರೇ ಹೇಳಿದ್ದಾರೆ. ಸತ್ಯ ಏನಿದೆ ಅದು ಜನರ ಮುಂದೆ ಇಡುವ ಕೆಲಸ ಆಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಪಠ್ಯಪುಸ್ತಕದಲ್ಲಿ ಟಿಪ್ಪು ಇತಿಹಾಸ ತೆಗೆಯುವ ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಅವರು, ಟಿಪ್ಪು ಸುಲ್ತಾನ್ 3,500 ಸಾವಿರ ದೇವಸ್ಥಾನಗಳನ್ನು ಕೇರಳದಲ್ಲಿ ನಾಶ ಮಾಡಿದ್ದು ಇತಿಹಾಸದಲ್ಲಿದೆ. ಲಕ್ಷಾಂತರ ಅಯ್ಯಂಗಾರಿಗಳನ್ನು ಮಾರಣಹೋಮ ಮಾಡಿದ್ದಾನೆ. ಇಂದೂ ಸಹ ಮಂಡ್ಯದಲ್ಲಿ ಒಂದು ಹಳ್ಳಿಯಲ್ಲಿ ದೀಪಾವಳಿ ಆಚರಣೆ ಮಾಡುವುದಿಲ್ಲ. ದೀಪಾವಳಿ ದಿನ ಟಿಪ್ಪು ಹಿಂದೂಗಳ ಮಾರಣ ಹೋಮ ಮಾಡಿದ ಕಾರಣ ದೀಪಾವಳಿ ಆಚರಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಇತಿಹಾಸದಲ್ಲಿ ಹೇಗಿದೆ ಹಾಗೆಯೇ ಮಕ್ಕಳಿಗೆ ಕಲಿಸಲಿ: ಯದುವೀರ್ ಒಡೆಯರ್
ಕೊಡಗಿನ ಹಿಂದೂ ಜನರ ಮಾರಣ ಹೋಮ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಆಗಿದ್ದು ಇತಿಹಾಸ ಪುಟದಲ್ಲಿದೆ. ಆ ಸತ್ಯವನ್ನು ನೋಡಿಯೇ ಟಿಪ್ಪು ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಅನೇಕ ರಾಜ ಮಹಾರಾಜರ ಕುರಿತು ತಪ್ಪು ಮಾಹಿತಿ ನೀಡಿದ್ದಾರೆ. ಅಂದರೆ ಅಕ್ಬರ್ ನನ್ನ ಇಷ್ಟು ದಿನ ಘನವಂತ ಎಂದು ನಮ್ಮೆಲ್ಲರಿಗೂ ಓದಿಸಿದ್ದಾರೆ. ರಾಣಾಪ್ರತಾಪ್ ಸಿಂಹ, ಪೃಥ್ವಿರಾಜ್ ಚವ್ಹಾಣ್ ಶೌರ್ಯದ ಬಗ್ಗೆ ಎಲ್ಲೂ ಉಲ್ಲೇಖ ಅಗಿಲ್ಲ. ವ್ಯವಸ್ಥಿತವಾಗಿ ಹಿಂದೂ ಧರ್ಮವನ್ನು, ಹಿಂದೂ ಸಂಸ್ಕೃತಿಯನ್ನ ಇಷ್ಟು ದಿನ ಹಾಳು ಮಾಡಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅದನ್ನ ಸರಿಪಡಿಸುವಂತಹ ಕೆಲಸ ಎರಡು ಸರಕಾರ ಮಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಎಂದು ಯಡಿಯೂರಪ್ಪ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.