ಮೈಸೂರಿಗೂ ಕಾಲಿಟ್ಟ ಧ್ವಜ ದಂಗಲ್- ಪ್ರತಾಪ್ ಸಿಂಹ ವಿರೋಧದ ಬೆನ್ನಲ್ಲೇ ಟಿಪ್ಪು ಬಾವುಟ ತೆರವು

Public TV
2 Min Read
TIPPU FLAG PRATAP SIMHA

– ಟಿಪ್ಪು ಬಾವುಟದ ಪಕ್ಕದಲ್ಲಿದ್ದ ಹಸಿರು ಬಾವುಟ ತೆಗೆಯದ್ದಕ್ಕೆ ಕಿಡಿ

ಮೈಸೂರು: ಮಂಡ್ಯ (Mandya), ಬೆಂಗಳೂರು ಆಯ್ತು ಇದೀಗ ಧ್ವಜ ಗಲಾಟೆ ಮೈಸೂರಿಗೂ ಕಾಲಿಟ್ಟಿದೆ. ಮೈಸೂರಿನಲ್ಲಿ ಪಾರ್ಕ್ ವೊಂದರಲ್ಲಿ ಟಿಪ್ಪು ಬಾವುಟ (Tippu Flag) ಹಾರಾಟ ಮಾಡಲಾಗಿತ್ತು.

ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿಯ ಅಂಬೇಡ್ಕರ್ ಪಾರ್ಕ್ ನಲ್ಲಿ (Ambedkar Park) ಟಿಪ್ಪು ಬಾವುಟ ಹಾರಾಡುತ್ತಿತ್ತು. ಈ ವಿಚಾರವನ್ನು ಸಂಸದ ಪ್ರತಾಪ್ ಸಿಂಹ (Pratap Simha) ಅವರು ಎಕ್ಸ್ ಮಾಡುವ ಮೂಲಕ ಪ್ರಶ್ನಿಸಿದ್ದರು. ಟಿಪ್ಪು ಬಾವುಟದ ಫೋಟೋ ಹಂಚಿಕೊಂಡ ಸಂಸದರು, ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರೋಡ್ ನಲ್ಲಿರುವ ಅಂಬೇಡ್ಕರ್ ಪಾರ್ಕ್ ನಲ್ಲಿ ಟಿಪ್ಪು ಭಾವುಟ ಹಾಕಿದ್ದಾರಲ್ಲಾ ಅವರು ಯಾರ ಅನುಮತಿ ಪಡೆದಿದ್ದಾರೆ ಸಿದ್ದರಾಮಯ್ಯನವರೇ, ಪರಮೇಶ್ವರರೇ ಎಂದು ಪ್ರಶ್ನಿಸಿದ್ದರು.

ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗತೊಡಗಿತು. ಸಂಸದರ ಪೋಸ್ಟ್ ಬಳಿಕ ಟಿಪ್ಪು ಬಾವುಟ ಕುರಿತು ವಿವಾದವಾಗುವ ಮುನ್ನವೇ ಎಚ್ಚೆತ್ತ ಮೈಸೂರು ಜಿಲ್ಲಾಡಳಿತವು ಟಿಪ್ಪು ಬಾವುಟವನ್ನು ತೆರವುಗೊಳಿಸಿತು. ಆದರೆ ಅದರ ಪಕ್ಕದಲ್ಲೇ ಇರುವ ಹಸಿರು ಬಾವುಟ ತೆರವು ಮಾಡದ್ದಕ್ಕೆ ಮತ್ತೆ ಸಂಸದರು ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು, ಆದ್ರೆ ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ? ಕೈಲಾಸ್ ಪುರಂ, 4 ನೇ ಮುಖ್ಯರಸ್ತೆ, ಅಂಬೇಡ್ಕರ್ ಪಾರ್ಕ್, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜವಿರುವುದು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಬಿಗಿ ಭದ್ರತೆಯಲ್ಲಿ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಕೋರ್ಟ್‍ಗೆ ಹಾಜರು

ಮಂಡ್ಯದ ಕೆರೆಗೋಡುವಿನಲ್ಲಿ ಶುರುವಾದ ಬಾವುಟ ದಂಗಲ್ ಬೆಂಗಳೂರಿಗೆ ಆವರಿಸಿಕೊಂಡಿದೆ. ಶಿವಾಜಿ ನಗರದ ಚಾಂದಿ ಚೌಕ್‍ನಲ್ಲಿ ಹಾಕಲಾಗಿದ್ದ ಹಸಿರು ಬಾವುಟ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಮಂಡ್ಯ ಘಟನೆಗೆ ಲಿಂಕ್ ಕೊಟ್ಟು ಪಬ್ಲಿಕ್ ಪ್ರಶ್ನೆ ಮಾಡುತ್ತಿದ್ದಂತೆಯೇ ಎಚ್ಚೆತ್ತ ಶಿವಾಜಿ ನಗರ ಪೊಲೀಸರು ಹಸಿರು ಬಾವುಟ ತೆಗೆಸಿ ರಾಷ್ಟ್ರಧ್ವಜ ಹಾಕಿದ್ದರು.

ಅದಾದ ಬಳಿಕ ಜೆ.ಜೆ.ನಗರದ ಸಂಗಮ್ ಸರ್ಕಲ್ ನಲ್ಲಿ ಹಾಕಲಾಗಿದ್ದ ಹಸಿರು ಬಾವುಟದ ಫೋಟೋ ಹಾಕಿ ವೈರಲ್ ಮಾಡಲಾಗುತ್ತಿತ್ತು. ಎರಡು ದಿನದಿಂದ ಜೆ.ಜೆ ನಗರದ ಸಂಗಮ್ ಸರ್ಕಲ್ ನಲ್ಲಿ ಹಾಕಿದ್ದ ಧರ್ಮದ ಹಸಿರು ಬಣ್ಣದ ಬಾವುಟವನ್ನ ತೆರವು ಮಾಡಿದ್ದಾರೆ. ಧರ್ಮದ ಹಸಿರು ಬಣ್ಣದ ಬಾವುಟ ಕಟ್ಟಲು ಹಾಕಿದ್ದ ಹಸಿರು ಬಣ್ಣದ ಪೋಲ್ ನಲ್ಲಿದ್ದ ಬಾವುಟ ತೆರವು ಮಾಡಿ ಪೋಲ್ ಖಾಲಿ ಬಿಟ್ಟಿದ್ದಾರೆ.

Share This Article