ಬೆಂಗಳೂರು: ರಾಜ್ಯಪಾಲರ ಭೇಟಿಗೆ ಸಿಎಂ ಕಾಲಾವಕಾಶ ಕೇಳಿದ ಬೆನ್ನಲ್ಲೇ ರಾಜಭವನ ಹಾಗೂ ವಿಧಾನಸೌಧದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸ್ವತಃ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ವಿಧಾನಸೌಧದ ಸುತ್ತ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಸಿಎಂ ಇಂದೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ. ಆದರೆ ಸ್ಪೀಕರ್ ಇಂದೇ ಪ್ರಕ್ರಿಯೆ ನಡೆಸಲೇಬೇಕೆಂದು ದೋಸ್ತಿ ನಾಯಕರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಇಂದೇ ಮತದಾನ ನಡೆಯುವ ಸಾಧ್ಯತೆ ಹೆಚ್ಚಿದೆ.
ಮಧ್ಯಾಹ್ನದಿಂದ ಸಿಎಂ ಕಲಾಪಕ್ಕೆ ಗೈರಾಗಿದ್ದಾರೆ. ಇಂದು ದೋಸ್ತಿ ಪಕ್ಷದ ಒಟ್ಟು 100 ಶಾಸಕರು ಹಾಜರಾಗಿದ್ದರೆ ಬಿಜೆಪಿಯ 105 ಶಾಸಕರು ಹಾಜರಾಗಿದ್ದರು. ಹೀಗಾಗಿ ಬಹುಮತಕ್ಕೆ 103 ಶಾಸಕರ ಬೆಂಬಲ ಬೇಕಿದೆ.