ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಬೇಕು ಎಂದು ಬಯಸಿದ್ದ ಆದಿತ್ಯ ರಾವ್ಗೆ ಇಂದು ಟೈಟ್ ಸೆಕ್ಯೂರಿಟಿ ಸಿಕ್ಕಿದೆ.
ಹೌದು. ಆದಿತ್ಯ ರಾವ್ ಬೆಂಗಳೂರು ಏರ್ ಪೋರ್ಟಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಬೇಕು ಎಂದು ಬಯಸಿದ್ದ. ಆದರೆ ಆತನಿಗೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ನೊಂದಿದ್ದ ಆದಿತ್ಯ ರಾವ್, ಹುಸಿಬಾಂಬ್ ಕರೆಯನ್ನು ಮಾಡಿ ಬೆದರಿಸಿದ್ದನು. ಇದೇ ಆದಿತ್ಯ ರಾವ್ ಇಂದು ಪೊಲೀಸರ ಅತಿಥಿಯಾಗಿದ್ದು, ಟೈಟ್ ಸೆಕ್ಯೂರಿಟಿ ಮೂಲಕ ಮಂಗಳೂರಿಗೆ ತೆರಳಿದ್ದಾನೆ.
ಖಾಕಿ ಪಡೆಯ ಜೊತೆಗೆ ಏರ್ ಪೋರ್ಟಿನ ಭದ್ರತಾ ಸಿಬ್ಬಂದಿಯ ಟೈಟ್ ಸೆಕ್ಯೂರಿಟಿ ಮೂಲಕ ಬೆಂಗಳೂರು ಏರ್ ಪೋರ್ಟ್ ಒಳಗೆ ಆದಿತ್ಯರಾವ್ ಎಂಟ್ರಿ ಕೊಟ್ಟಿದ್ದ. ಈ ವೇಳೆ ಈತನ ಜೊತೆ ಸುಮಾರು 100 ಮಂದಿ ಪೊಲೀಸರಿದ್ದರು. ಇದನ್ನೂ ಓದಿ: ಮಂಗ್ಳೂರು ಪೊಲೀಸರಿಗೆ ಬಾಂಬರ್ ಆದಿತ್ಯ ರಾವ್ ಹಸ್ತಾಂತರ
ಇತ್ತ ಇಡೀ ಕರುನಾಡನ್ನು ಬೆಚ್ಚಿಬೀಳಿಸಿದ ಮಂಗಳೂರು ಏರ್ ಪೋರ್ಟ್ ಬಾಂಬ್ ಪ್ರಕರಣದ ಆರೋಪಿ ಹೇಗಿರಬಹುದು, ಆತನನ್ನು ಬೆಂಗಳೂರಿಂದ ಮಂಗಳೂರಿಗೆ ಹೇಗೆ ಕರೆದುಕೊಂಡು ಹೋಗುತ್ತಾರೆ ಅನ್ನೋ ಕುತೂಹಲ ಜನರಲ್ಲಿತ್ತು. ಬಾಂಬರ್ ಯಾರು, ಹೇಗಿದ್ದಾನೆ ಎಂದು ಕುತೂಹಲದಿಂದ ನೋಡಲು ಏರ್ ಪೋರ್ಟ್ ಹೊರಗಡೆ ಜನ ಸಾಗರವೇ ಸೇರಿತ್ತು. ಪೊಲೀಸರು ಕೆಲ ಕಾಲ ನಿರ್ಗಮನದ ಗೇಟ್ ಮುಚ್ಚಿದ್ದರು. ಆರೋಪಿಯನ್ನು ಕರೆದೊಯ್ಯುವ ವೇಳೆ ಜನರನ್ನು ಹೊರಗಡೆ ನಿಲ್ಲಿಸಲಾಗಿತ್ತು. ಯಾರಿಗೂ ಈ ಸಂದರ್ಭದಲ್ಲಿ ಪ್ರವೇಶ ಇರಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಬಾಂಬರನ್ನು ನೋಡುವ ಕುತೂಹಲದಿಂದ ನಿರ್ಗಮನ ಗೇಟ್ ಮುಂದೆ ಜಮಾಯಿಸಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ಫ್ಲೈಟ್ ಮೂಲಕ ಆರೋಪಿಯನ್ನು ಕರೆದೊಯ್ಯುವ ಪ್ರಕ್ರಿಯೆ ತೀರಾ ಕಡಿಮೆ. ಆದರೆ ಇದೀಗ ಈ ಆರೋಪಿಯನ್ನು ವಿಮಾನದ ಮೂಲಕವೇ ಮಂಗಳೂರಿಗೆ ರವಾನೆ ಮಾಡಲಾಗಿದೆ.