ಮಡಿಕೇರಿ: ಸಿದ್ದಾಪುರದಿಂದ ಮೈಸೂರಿಗೆ (Mysuru) ಸಂಪರ್ಕ ಕಲ್ಪಿಸುವ ಮಾಲ್ತಾರೆ ಗ್ರಾಮ ಸಮೀಪದ ಕುಶಾಲನಗರ ಹಾಗೂ ದೇವಮತಿ ಅರಣ್ಯ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಹುಲಿಯೊಂದು (Tiger_ ಪ್ರಯಾಣಿಕರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೈಸೂರಿನತ್ತ ಪ್ರಯಾಣಿಸುತ್ತಿದ್ದ ವಾಹನ ಸವಾರರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ (Mobile Camera) ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಸಂಗ್ರಹಿಸಿದ್ದ ಪೆಟ್ರೋಲ್ ಕ್ಯಾನ್ಗೆ ಬೆಂಕಿ, ಇಡೀ ಮನೆಯೇ ಧಗಧಗ – ಮಹಿಳೆ ಗಂಭೀರ
ಮಾಹಿತಿಯ ಪ್ರಕಾರ, ಮಾಲ್ತಾರೆ ಗ್ರಾಮ ವ್ಯಾಪ್ತಿಯ ದೇವಮತಿ ಅರಣ್ಯದ (Devamati Forest) ಒಳಭಾಗದಲ್ಲಿ ರಸ್ತೆ ದಾಟುತ್ತಿದ್ದ ಹುಲಿ ಕೆಲ ಹೊತ್ತಿನವರೆಗೆ ವಾಹನಗಳ ಮುಂದೆ ಕಾಣಿಸಿಕೊಂಡಿದೆ. ಅರಣ್ಯ ಪ್ರದೇಶವಾಗಿರುವುದರಿಂದ ವಾಹನ ಸವಾರರು ಕ್ಷಣಕಾಲ ನಿಂತು ಹುಲಿಯನ್ನ ಗಮನಿಸಿದ್ದು, ಬಳಿಕ ಅದು ಮರಗಳ ಮಧ್ಯೆ ಕಣ್ಮರೆಯಾಗಿದೆ.

ಈ ಘಟನೆ ಸ್ಥಳೀಯರಲ್ಲಿ ಕುತೂಹಲದ ಜತೆಗೆ ಸ್ವಲ್ಪ ಆತಂಕವನ್ನೂ ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡುಜೀವಿಗಳ ಸಂಚಾರ ಹೆಚ್ಚಾಗಿದೆ ಎನ್ನುವ ಮಾತು ಕೇಳಿಬರುತ್ತಿದ್ದು, ಹುಲಿ ಪ್ರತ್ಯಕ್ಷವಾದ ಘಟನೆ ಇದಕ್ಕೆ ಮತ್ತಷ್ಟು ಬಲ ನೀಡಿದೆ. ಇದನ್ನೂ ಓದಿ: ಏ.1 ರಿಂದ ವಾರ್ಷಿಕ ಟೋಲ್ ಪಾಸ್ ದರ ಏರಿಕೆ – ಅರ್ಧದಷ್ಟು ವಿನಾಯ್ತಿ ಯಾವಾಗ ಸಿಗುತ್ತೆ?
ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರದೇಶವು ಅರಣ್ಯ ವಲಯಕ್ಕೆ ಸಮೀಪವಾಗಿರುವುದರಿಂದ ಹುಲಿ ಸಂಚರಿಸುವುದು ಅಸಾಮಾನ್ಯವಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ, ಸಾರ್ವಜನಿಕರು ಅನವಶ್ಯಕವಾಗಿ ವಾಹನಗಳನ್ನು ನಿಲ್ಲಿಸಿ ಕಾಡುಪ್ರಾಣಿಗಳಿಗೆ ಅಡ್ಡಿ ಉಂಟುಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು ಹಾಗೂ ರಾತ್ರಿ ವೇಳೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಸ್ಥಳೀಯ ಗ್ರಾಮಸ್ಥರು, ಕಾಡುಜೀವಿಗಳ ಚಲನವಲನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

