ಚಾಮರಾಜನಗರ: ನರಭಕ್ಷಕ ಹುಲಿ ಬಂಡಿಪುರದಲ್ಲಿ ಸೆರೆ ಸಿಕ್ಕ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಸುತ್ತಲಿನ ಗ್ರಾಮಸ್ಥರು ಹುಂಡೀಪುರದ ಮಾಳಿಗಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.
ಹುಲಿ ಸೆರೆ ಸಿಕ್ಕರೆ ವಿಶೇಷ ಪೂಜೆ ಸಲ್ಲಿಸುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಹರಕೆ ಹೊತ್ತುಕೊಂಡಿದ್ದರು. ಅದರಂತೆ ಇಂದು ಹುಂಡೀಪುರದ ಮಾಳಿಗಮ್ಮನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹುಲಿ ಸೆರೆಯಾದ ಎರಡು ದಿನಗಳ ನಂತರ ದೇವಿಗೆ ಪೂಜೆ ಸಲ್ಲಿಸಿದ್ದು, ಪ್ರತಿ ಮಂಗಳವಾರ ಪೂಜೆ ಸಲ್ಲಿಸಲು ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಅರಣ್ಯ ಇಲಾಖೆಯ ಪೂಜೆಗೆ ಗ್ರಾಮಸ್ಥರು ಸಹ ಸಾಥ್ ನೀಡುತ್ತಿದ್ದಾರೆ.
ವಿಶೇಷ ಪೂಜೆಗಾಗಿ ಗ್ರಾಮಸ್ಥರು ಪ್ರತಿ ಮನೆಯಿಂದ ಚಂದಾ ಎತ್ತಿದ್ದು, ಹುಂಡಿಪುರ, ಚೌಡಹಳ್ಳಿ, ಹುಲ್ಲೇಪುರ ಮತ್ತು ಶಿವಪುರ ಗ್ರಾಮಸ್ಥರು ವಿಜೃಂಭಣೆಯಿಂದ ಪೂಜೆ ನಡೆಸಿದ್ದಾರೆ. ಪೂಜೆಯ ಅಂಗವಾಗಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ ಹರಕೆ ಹೊತ್ತ ಮರು ದಿನವೇ ಭಾನುವಾರ ಸಂಜೆ ಹುಲಿ ಸೆರೆಯಾಗಿತ್ತು. ಹರಕೆ ಹೊತ್ತ ಕಾರಣದಿಂದಲೇ ಹುಲಿ ಸೆರೆಯಾಗಿದೆ ಎಂದು ಭಾವಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ.
ಸೆರೆಯಾಗಿದ್ದು ಹೇಗೆ?
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ನರಹಂತಕನ ದಾಳಿಯಿಂದ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ ಮತ್ತು ಶಿವಮಾದಪ್ಪ ಎಂಬುವರು ಬಲಿಯಾಗಿದ್ದರು. ಎಷ್ಟೇ ಕಸರತ್ತು ನಡೆಸಿದರೂ ಸಹ ಹುಲಿ ಸೆರೆ ಸಿಕ್ಕಿರಲಿಲ್ಲ, ಕೊನೆಗೆ ಹರಸಾಹಸ ಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದರು.
ಬಂಡೀಪುರ ಅರಣ್ಯ ವ್ಯಾಪ್ತಿಯ ಮಗುವಿನಳ್ಳಿ ಬಳಿಯ ಸಿದ್ದಿಕಿ ಜಮೀನಿನಲ್ಲಿ ಭಾನುವಾರ ನರಭಕ್ಷಕ ಹುಲಿ ಕಾಣಿಸಿಕೊಂಡಿತ್ತು. ತಕ್ಷಣವೇ ಅಭಿಮನ್ಯು, ಜಯಪ್ರಕಾಶ್ ಗೋಪಾಲಸ್ವಾಮಿ ನೇತೃತ್ವದ ಸಾಕಾಣೆ ಆನೆ ತಂಡಗಳ ಸಹಾಯದಿಂದ ಅರಣ್ಯ ಇಲಾಖೆ ಹಾಗೂ ವೈದ್ಯರು ಸಿದ್ದಿಕಿ ಜಮೀನನ್ನು ಸುತ್ತುವರಿದಿದ್ದರು. ಈ ವೇಳೆ ಹುಲಿ ಇದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ವೈದ್ಯರು ಅರವಳಿಕೆ ಗನ್ನಿಂದ ಶೂಟ್ ಮಾಡಿದರು. ಆದರೆ ಅರವಳಿಕೆ ಸೂಜಿ ನೇರವಾಗಿ ಚುಚ್ಚಿದ್ದರೂ ನರಭಕ್ಷಕ ವ್ಯಾಘ್ರ ಪ್ರಜ್ಞೆ ಕಳೆದುಕೊಂಡಿರಲಿಲ್ಲ.
ಹುಲಿ ಪೊದೆಯೊಳಗೆ ಅಡಗಿ ಕುಳಿತಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು ವ್ಯಾಘ್ರವನ್ನು ಸುತ್ತುವರಿದು ನಿಂತಿದ್ದರು. ಬಳಿಕ ರಾಣಾ ಹೆಸರಿನ ನಾಯಿ ಸಹಾಯದಿಂದ ಹುಲಿ ಎಲ್ಲಿ ಅಡಗಿ ಕುಳಿತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಖಚಿತ ಪಡಿಸಿಕೊಂಡರು. ಹುಲಿ ಸೆರೆ ಕಾರ್ಯಾಚರಣೆ ನೋಡಲು ಸ್ಥಳೀಯ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಹ ಬಂದಿದ್ದರು. ಅಭಿಮನ್ಯು ನೇತೃತ್ವದ ಸಾಕಾನೆ ನೇತೃತ್ವದಲ್ಲಿ ಹುಲಿ ಬಳಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ವ್ಯಾಘ್ರನನ್ನು ಬೋನಿಗೆ ಹಾಕಿದ್ದರು.
ಬಂಡೀಪುರ ಅರಣ್ಯ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಲಿಂಗಪ್ಪ ಅಕ್ಟೋಬರ್ 7ರಂದು ಹಸು ಮೇಯಿಸಲು ಹೋಗಿದ್ದಾಗ ಹುಲಿ ತಿಂದು ಹಾಕಿತ್ತು. ಇದಾದ ಬಳಿಕ ಚೌಡಹಳ್ಳಿ ಸಮೀಪದ ಮೂರ್ಕಲ್ಲು ಗುಡ್ಡದ ಬಳಿ ಹುಲಿ ದಾಳಿಗೆ ಹಸು ಬಲಿಯಾಗಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಹುಲಿ ಸೆರೆಹಿಡಿಯುವಂತೆ ಪ್ರತಿಭಟನೆ ಮಾಡಿದ್ದರು. ಗ್ರಾಮಸ್ಥರ ಪ್ರತಿಭಟನೆಗೆ ಮಣಿದ ಅರಣ್ಯ ಇಲಾಖೆಯ ಎಪಿಸಿಸಿಎಫ್ ಜಗತ್ ರಾಂ ಹುಲಿಯ ಶೂಟೌಟ್ಗೆ ಆದೇಶ ಹೊರಡಿಸಿದ್ದರು. ಹುಲಿ ಶೂಟೌಟ್ ಆದೇಶ ನೀಡಿದ ಬೆನ್ನಲ್ಲೇ ವನ್ಯ ಪ್ರಿಯರು ಟ್ವಿಟ್ಟರ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು.
ಹುಲಿಯನ್ನು ಶೂಟ್ ಮಾಡಬಾರದು. ಬದಲಿಗೆ ಅದನ್ನು ಸೆರೆಹಿಡಿಯಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕೂಡ ಚರ್ಚೆಯಾಗಿತ್ತು. ಇದರಿಂದ ಎಚ್ಚೆತ್ತ ಬೆಂಗಳೂರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹುಲಿಯನ್ನು ಶೂಟ್ ಮಾಡದೇ ಸೆರೆಹಿಡಿಯುವಂತೆ ಸೂಚನೆ ನೀಡಿದ್ದರು.
ಹುಲಿಯ ಚಲನವಲನ ಪತ್ತೆಗೆ ಬಂಡೀಪುರ, ಕೆಬ್ಬೇಪುರ, ಮಕ್ಕಳಮಲ್ಲಪ್ಪ ದೇವಸ್ಥಾನದ ಸುತ್ತಮುತ್ತ ಅರಣ್ಯದಲ್ಲಿ 224 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು. ಇದರ ಜೊತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಅರಣ್ಯ ಇಲಾಖೆ ತೀರ್ಮಾನ ಮಾಡಿತ್ತು.