ರಾಂಚಿ: ಮನೆಯಲ್ಲಿ ಮಟನ್ ಅಡುಗೆ ಮಾಡುತ್ತಿದ್ದ ವೇಳೆ ಮಹಿಳೆ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿರುವ ಘಟನೆ ಜಾರ್ಖಂಡ್ನ ರಾಮಕಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕುಶ್ವರ್ ಗ್ರಾಮದಲ್ಲಿ ನಡೆದಿದೆ.
ಕಲಾಶಿಯಾ ದೇವಿ ಸಾವನ್ನಪ್ಪಿರುವ ಮಹಿಳೆಯಾಗಿದ್ದು, ಮಂಗಳವಾರ ಕಲಾಶಿಯಾ ಮಾಂಸದ ಅಡುಗೆಯನ್ನು ಮಾಡುತ್ತಿದ್ದರು. ಇದರ ವಾಸನೆ ದೂರದಲ್ಲಿದ್ದ ಹುಲಿಗೆ ಬಡಿದಿದೆ. ಹುಲಿ ಮಾಂಸವನ್ನು ಹುಡುಕುತ್ತ ಗ್ರಾಮದತ್ತ ಧಾವಿಸಿದೆ. ನಂತರ ಮಹಿಳೆ ಮಾಂಸ ಮಾಡುತ್ತಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿದೆ.
ಕಾಡಿನ ಬಳಿಯೆ ಕಲಾಶಿಯಾ ದೇವಿ ಅವರ ಗ್ರಾಮವಿದೆ. ಇವರೆಲ್ಲರೂ ಕಾಡು ಪ್ರಾಣಿಗಳು ಓಡಾಡುವ ಶಬ್ದವನ್ನು ಕೇಳಿಯೆ ಬದುಕುತ್ತಿದ್ದರು. ಪ್ರಾಣಿಗಳು ಮನುಷ್ಯರನ್ನು ಕೊಲ್ಲುತ್ತಿವೆ ಎಂಬುದರ ಕುರಿತು ಅರಿವಿದ್ದರೂ ಅದೇ ಕಾಡಿನ ಬಳಿ ಗ್ರಾಮಸ್ಥರು ವಾಸಿಸುತ್ತಿದ್ದರು.
ಹುಲಿಯು ಗುಡಿಸಲಿಗೆ ನುಗ್ಗಿ ಬಾಯಿಂದಲೇ ಮಹಿಳೆಯನ್ನು ಕಾಡಿಗೆ ಎಳೆದೊಯ್ದಿದೆ. ಈ ವೇಳೆ ಮಹಿಳೆ ಸಹಾಯಕ್ಕಾಗಿ ಕಿರುಚಿದ್ದು, ಧ್ವನಿ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಆದರೆ ತಡವಾಗಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಗುಡಿಸಲಿನೊಳಗೆ ಕಲಾಶಿಯಾ ಅವರ ದೇಹದ ಮಾಂಸದ ತುಂಡುಗಳು ಬಿದ್ದಿರುವುದನ್ನು ಕಂಡು ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.
ಅರಣ್ಯ ಇಲಾಖೆ ಘಟನೆಯನ್ನು ದೃಢಪಡಿಸಿದೆ. ಆದರೆ ಮಹಿಳೆಯನ್ನು ಕೊಂದಿದ್ದು, ಹುಲಿಯಲ್ಲ ಚಿರತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳ್ಳಿಯ ಸಮೀಪವಿರುವ ಅರಣ್ಯವು ಬೆಟ್ಲಾ ಹುಲಿ ಮೀಸಲು ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿದ್ದು, ಹೀಗಾಗಿ ಪ್ರಾಣಿಗಳು ಹೆಚ್ಚು ವಲಸೆ ಬರುತ್ತವೆ. ಈ ಹಿಂದೆ ಸಹ ಇಂತಹ ಘಟನೆಗಳು ನಡೆದಿದ್ದು, ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.