ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಂದುವರಿದ ರಾಜಕೀಯ ಕ್ಷೀಪ್ರ ಬೆಳವಣಿಗೆಗಳ ನಡುವೆಯೇ ಸಿಎಂ ಅವರು ನಾಳೆ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಗುರುವಾರ ನಡೆಯಲಿರುವ ಸಂಪುಟ ಸಭೆ ಕುತೂಹಲ ಮೂಡಿಸಿದ್ದು, ಬೆಳಗ್ಗೆ 11 ಗಂಟೆಗೆ ಕ್ಯಾಬಿನೆಟ್ ಸಭೆ ಆರಂಭವಾಗಲಿದೆ.
ಇಂದು ಅತೃಪ್ತ ಶಾಸಕರ ಮನವೊಲಿಕೆ ಕಾರ್ಯ ಹಾಗೂ ಮತ್ತೆ ಇಬ್ಬರು ಕಾಂಗ್ರೆಸ್ ಶಾಸಕ ರಾಜೀನಾಮೆಗೆ ಕಾರ್ಯ ನಡೆಯಿತು. ಈ ಹಿನ್ನೆಲ್ಲೆಯಲ್ಲಿ ಸಿಎಂ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಪ್ರಮುಖವಾಗಿದೆ. ಇತ್ತ ಸಿಎಂ ಅವರು ಇಂದು ಸಂಜೆ ವೇಳೆಗೆ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವ ಚರ್ಚೆ ನಡೆಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಈ ಚರ್ಚೆಯಲ್ಲಿ ಮುಂದಿನ ನಡೆಯ ಕುರಿತ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇಂದು ರಾಜೀನಾಮೆ ನೀಡಿದ್ದ ಶಾಸಕ ಸುಧಾಕರ್ ಅವರ ಮನವೊಲಿಕೆ ಮಾಡುವ ಸಿದ್ದರಾಮಯ್ಯ ಅವರ ಪ್ರಯತ್ನ ವಿಫಲವಾಗಿದೆ. ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಶಾಸಕ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಅತ್ತ ಮುಂಬೈಗೆ ತೆರಳಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ವಿಫಲವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೈತ್ರಿ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಬಂಡಾಯ ಶಾಸಕ ರಾಜೀನಾಮೆ ವಾಪಸ್ ಪಡೆಯುವ ಕುರಿತು ಮನವೊಲಿಸಲು ಮೈತ್ರಿ ನಾಯಕರಿಗೆ ಆಗಿಲ್ಲ. ಸದ್ಯ ದೋಸ್ತಿ ನಾಯಕರು ಸರ್ಕಾರ ಉಳಿಸುವ ಕಾರ್ಯವನ್ನು ಕೈ ಬಿಟ್ಟಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ರಾಜೀನಾಮೆಗೆ ಮುಂದಾಗಲಿದ್ದಾರಾ ಎಂಬ ಅನುಮಾನ ಮೂಡಿದೆ.