ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಧಾರ್ಮಿಕ ಕೇಂದ್ರ, ಪ್ರೇಕ್ಷಣೀಯ ಸ್ಥಳ ಮಾವಿನಕೆರೆ ಬೆಟ್ಟದ ಮೇಲಿನ ಶ್ರೀರಂಗನಾಥಸ್ವಾಮಿ ದೇವಾಲಯದ ಗೋಪುರಕ್ಕೆ ಸಿಡಿಲು ಬಡಿದಿದೆ.
ಶನಿವಾರ ಬೆಳಗ್ಗಿನ ಜಾವ ಸುರಿದ ಮಳೆಯ ಸಂದರ್ಭ ಗೋಪುರದ ಕಳಸ ಭಾಗಕ್ಕೆ ಸಿಡಿಲು ಬಡಿದಿದ್ದು, ರಾಜಗೋಪುರದ ಮೇಲಿನ ಸಿಮೆಂಟ್ ವಿಗ್ರಹಗಳು ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ. ಸಿಡಿಲು ಬಡಿದ ವಿಷಯ ಭಕ್ತರಲ್ಲಿ ಆತಂಕ ಮೂಡಿಸಿದ್ದು, ಕಂದಾಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಜುರಾಯಿ ಇಲಾಖೆಗೆ ಒಳಪಡುವ ದೇವಾಲಯವಾದ್ದರಿಂದ ದುರಸ್ಥಿ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯ ಈ ಭಾಗದ ಪ್ರಸಿದ್ಧವಾದ ದೇವಾಲಯವಾಗಿದ್ದು, ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಕುಟುಂಬ ವರ್ಗ ಈ ದೇವಾಲಯದಲ್ಲಿ ಹೆಚ್ಚಿನ ಪೂಜಾ ಕೈಂಕರ್ಯ ಕೈಗೊಳ್ಳುತ್ತದೆ ಎನ್ನುವುದು ವಿಶೇಷ.