ಬೆಂಗಳೂರು: ಸದ್ಯ ಹೊಸಾ ಅಲೆಯ ಚಿತ್ರವಾಗಿ ಭಾರೀ ಕ್ಯೂರಿಯಾಸಿಟಿಗೆ ಕಾರಣವಾಗಿರೋ ಚಿತ್ರ ಉದ್ದಿಶ್ಯ. ಹೇಮಂತ್ ಕೃಷ್ಣಪ್ಪ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡು, ಮುಖ್ಯ ಪಾತ್ರವನ್ನೂ ನಿರ್ವಹಿಸಿರೋ ಈ ಚಿತ್ರದ ಕಥೆಯ ಸುತ್ತಾ ನಾನಾ ಕಥೆಗಳೇ ಹರಿದಾಡುತ್ತಿವೆ!
ಇದು ಹಾಲಿವುಡ್ ಕಥೆಗಾರ ಬರೆದಿರೋ ಕಥೆಯಾದ್ದರಿಂದ ಉಳಿದೆಲ್ಲದಕ್ಕಿಂತಲೂ ಆ ಬಗೆಗೇ ಪ್ರೇಕ್ಷಕರು ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ದಾರೆ. ಅದನ್ನು ಚೂರು ತಣಿಸುತ್ತಲೇ ಮತ್ತಷ್ಟು ಕುತೂಹಲ ಹೆಚ್ಚಿಸುವಂಥಾ ಇಷ್ಟಿಷ್ಟೇ ವಿಚಾರಗಳು ಚಿತ್ರ ತಂಡದ ಕಡೆಯಿಂದ ಹೊರ ಬೀಳುತ್ತಿದೆ!
ಇದೊಂದು ಥ್ರಿಲ್ಲರ್ ಕಥಾನಕ. ಕ್ಷಣ ಕ್ಷಣವೂ ರೋಚಕ ತಿರುವು ಪಡೆದುಕೊಳ್ಳುತ್ತಾ ಸಾಗುವ ಕಥೆಗೆ ಒಂದೊಂದು ಹಂತದಲ್ಲಿ ಹಾರರ್ ತಿರುವುಗಳೂ ಇರಲಿವೆಯಂತೆ. ಒಬ್ಬ ದುಷ್ಟ ತನ್ನ ಸ್ವಾರ್ಥಕ್ಕಾಗಿ ಹೇಗೆ ಬ್ಲಾಕ್ ಮ್ಯಾಜಿಕ್ಕನ್ನು ಬಳಸಿಕೊಳ್ಳುತ್ತಾನೆಂಬುದರ ಸುತ್ತ ಉಸಿರು ಬಿಗಿ ಹಿಡಿದು ನೋಡುವಂಥಾ ಸನ್ನಿವೇಶಗಳೂ ಇವೆಯಂತೆ. ಇದರನ್ವಯ ಹೇಳೋದಾದರೆ ಬ್ಲಾಕ್ ಮ್ಯಾಜಿಕ್ ಎಂಬುದು ಕೂಡಾ ಈ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಿದೆ.
ನಮ್ಮಲ್ಲಿ ಇಂಥಾ ಬ್ಲಾಕ್ ಮ್ಯಾಜಿಕ್ಕನ್ನು ಹಲವಾರು ಬಾರಿ ಚಿತ್ರಗಳ ಮೂಲಕ ತೋರಿಸಲಾಗಿದೆ. ಆದರೆ ಈ ವಿಚಾರವನ್ನು ಹಾಲಿವುಡ್ ಕಥೆಗಾರ ಹೇಗೆ ನಿರೂಪಿಸಿದ್ದಾನೆಂಬ ಬಗ್ಗೆ ಒಂದು ಕುತೂಹಲ ಇದ್ದೇ ಇದೆ. ಈ ಚಿತ್ರದ ಹೊಸತನದ ಗುಟ್ಟೂ ಕೂಡಾ ಅದರಲ್ಲಿಯೇ ಅಡಗಿದೆ. ಅದೇನು ಎಂಬುದು ಈ ವಾರವೇ ಬಯಲಾಗಲಿದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv