ಚಾಮರಾಜನಗರ: ಜೈಲಿನಲ್ಲಿರುವ ಸ್ವಾಮೀಜಿ ಹೆಸರಿಗೆ ಮಠದ ಆಸ್ತಿಯನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದ ಮೂವರು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಕೊಳ್ಳೇಗಾಲ ಕಸಬಾ ಹೋಬಳಿ ರಾಜಸ್ವ ನಿರೀಕ್ಷರಾದ ನಿರಂಜನ್, ಸತೀಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಹೇಮಾ ಮೂವರನ್ನು ಅಮಾನತು ಮಾಡುವಂತೆ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ನೀಡಿದ್ದಾರೆ. ಮಹದೇಶ್ವರಬೆಟ್ಟದ ಸಾಲೂರು ಮಠಕ್ಕೆ ಸೇರಿದ ಆಸ್ತಿಯನ್ನು ಸುಳ್ವಾಡಿ ವಿಷಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಹೆಸರಿಗೆ ಖಾತೆಗೆ ಮೂವರು ಅಧಿಕಾರಿಗಳು ಮಾಡಿಕೊಟ್ಟಿದ್ದರು.
ಜೈಲಿನಲ್ಲಿರುವ ಸ್ವಾಮೀಜಿಯೊಂದಿಗೆ ಶಾಮೀಲಾಗಿ ಅಧಿಕಾರಿಗಳು ಖಾತೆ ಮಾಡಿ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ತಕ್ಷಣ ಮೂವರನ್ನೂ ಅಮಾನತು ಮಾಡುವಂತೆ ಜೊತೆಗೆ ಖಾತೆ ರದ್ದುಪಡಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.
ಕೊಳ್ಳೇಗಾಲ ಕಸಬಾ ಹೋಬಳಿ ಲಿಂಗಣಾಪುರ ಸರ್ವೆ ನಂಬರ್ ರಲ್ಲಿ 203 ರಲ್ಲಿನ 2 ಎಕರೆ 44 ಸೆಂಟ್ಸ್ ಭೂಮಿಯನ್ನು ಜೈಲಿನಲ್ಲಿದ್ದುಕೊಂಡೇ ಇಮ್ಮಡಿ ಮಹದೇವಸ್ವಾಮೀಜಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದನು. ಇದು ಕೋಟ್ಯಂತರ ಬೆಲೆಬಾಳುವ ಭೂಮಿಯಾಗಿದೆ. ಸದ್ಯಕ್ಕೆ ಸ್ವಾಮೀಜಿ ಬೇಲ್ ಸಿಗದೆ ಜೈಲಿನಲ್ಲಿದ್ದಾನೆ.
ಸ್ವಾಮೀಜಿ ಹಣಕ್ಕಾಗಿ ಮಠದ ಆಸ್ತಿ ಮಾರಾಟಕ್ಕೆ ಹುನ್ನಾರ ನಡೆಸಿದ್ದನು. ಈಗ ಆರೋಪಿ ಸ್ವಾಮೀಜಿ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಲು ಹಣ ಹೊಂದಿಸಲು ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ.