ಬೆಂಗಳೂರು: ನಗರದಲ್ಲಿ ಭಾನುವಾರ ತಡರಾತ್ರಿ ಭೀಕರ ಬೈಕ್ ಅಪಘಾತ ಸಂಭವಿಸಿದ್ದು ಮೂವರು ಟೆಕ್ಕಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕುಣಿಗಲ್ ನಿವಾಸಿ ಅನಿಲ್, ಟಿ ನರಸಿಪುರದ ಕಾರ್ತಿಕ್ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರು ಶ್ರೀನಾಥ್ ಮೃತ ಟೆಕ್ಕಿಗಳು. ಈ ಘಟನೆ ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆ ಬಳಿ ನಡೆದಿದೆ.
ಮೂವರು ಟೆಕ್ಕಿಗಳು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಕಡೆಯಿಂದ ಮಾಗಡಿ ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಕಾರ್ತಿಕ್ ಎಂಬಾತ ಯಮಹ ಆರ್ 15 ಬೈಕನ್ನು ವೇಗವಾಗಿ ಚಲಾಯಿಸಿದ್ದಾನೆ. ಪರಿಣಾಮ ಬೈಕ್ ರಸ್ತೆ ಬದಿಯಲ್ಲಿದ್ದ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಂತರ ಡಿವೈಡರ್ಗೆ ಗುದ್ದಿದೆ.
ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೆ ಮೂವರು ಟೆಕ್ಕಿಗಳು ಕೂಡ ಬೈಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸದ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ರಸ್ತೆಯಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ವಿಕ್ಟೋರಿಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.