ನವದೆಹಲಿ: ಹಳಿ ಮೇಲೆ ಕುಳಿತಿದ್ದ ಮೂವರು ರೈಲಿಗೆ ಬಲಿಯಾಗಿರುವ ದುರ್ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ಬೆಳಿಗ್ಗೆ ನಂಗ್ಲೋಯಿ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಮೂವರು ಮದ್ಯ ಸೇವನೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಮೂವರೂ ಬೆಳಗ್ಗೆ ಸುಮಾರು 7.15 ಕ್ಕೆ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಬಿಕಾನೆರ್-ದೆಹಲಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಈ ಸಂದರ್ಭದಲ್ಲಿ ರೈಲು ಚಾಲಕ ಹಾರ್ನ್ ಹಾಕಿದ್ದಾನೆ. ಆದರೂ ಅವರು ಹಳಿಯಿಂದ ಕದಲದ ಕಾರಣ ಅವರ ಮೇಲೆ ರೈಲು ಸಂಚರಿಸಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ರೈಲ್ವೇ ಡಿಸಿಪಿ ದಿನೇಶ್ ಗುಪ್ತ ಅವರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ರೈಲ್ವೇ ರಕ್ಷಣಾ ಪಡೆ ಮತ್ತು ಸಿವಿಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯಕ್ಕೆ ಮೃತರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕುರಿತು ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಜಯದಶಿಮಿ ಹಿನ್ನೆಲೆಯಲ್ಲಿ ಅಮೃತಸರದ ಜೋದಾ ಪಾಟ್ಕರ್ ನಲ್ಲಿ ರಾವಣನ ಪ್ರತಿಕೃತಿ ಸಂಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದು ಕೆಲವರು ರೈಲು ಹಳಿ ಮೇಲೆ ನಿಂತಿದ್ದರು. ಈ ವೇಳೆ ಹಳಿ ಮೇಲೆ ಜಮಾಯಿಸಿದ್ದ ಜನರ ಮೇಲೆ ಏಕಾಏಕಿ ರೈಲು ಹರಿದಿತ್ತು. ಈ ದುರಂತದಲ್ಲಿ 60ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv