ರಾಯಚೂರು: ಅಕ್ರಮ ಮರಳುಗಾರಿಕೆಯಿಂದಾಗಿ ಉಂಟಾಗಿರುವ ಹೊಂಡವೊಂದು ಕಳೆದ ಮೂರು ತಿಂಗಳಲ್ಲಿ ಮೂವರನ್ನ ಬಲಿ ಪಡೆದಿದೆ.
ರಾಯಚೂರು ತಾಲೂಕಿನ ಗುಂಜಳ್ಳಿಯಲ್ಲಿ ಬಹಿರ್ದೆಸೆಗೆ ತೆರಳಿ ಎರಡು ದಿನಗಳಿಂದ ಕಾಣೆಯಾಗಿದ್ದ ವ್ಯಕ್ತಿ ಹೊಂಡದಲ್ಲಿ ಶವವಾಗಿ ತೇಲಿದ್ದಾನೆ. ಗ್ರಾಮದ 35 ವರ್ಷದ ಜನಾರ್ಧನ್ ಸಾವನ್ನಪ್ಪಿರುವ ಮೃತ ದುರ್ದೈವಿ.
ಅಕ್ರಮ ಮರಳುಗಾರಿಕೆಯಿಂದ ಹಳ್ಳದ ಬಳಿ ಈ ಹೊಂಡ ಸೃಷ್ಠಿಯಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಕೂಡ ಹೊಂಡದ ಹತ್ತಿರವೇ ಇರುವುದರಿಂದ ಜನರು ಈಗ ಭಯಗೊಂಡಿದ್ದಾರೆ.
ಮಾರ್ಚ್ 5 ರಂದು ಹೊಂಡದಲ್ಲಿ ಮೀನು ಹಿಡಿಯಲು ಹೋಗಿ ಗ್ರಾಮದ ಇಬ್ಬರು ಬಾಲಕರು ಹೊಂಡದಲ್ಲಿ ಸಾವನ್ನಪ್ಪಿದ್ದರು. ವಿನಯ್ ಹಾಗೂ ಅಖಿಲೇಶ್ ಮೃತಪಟ್ಟ ವಿದ್ಯಾರ್ಥಿಗಳು. ಈಗ ಹೊಂಡ ಪುನಃ ಇನ್ನೋರ್ವ ವ್ಯಕ್ತಿಯನ್ನು ಬಲಿಪಡೆದಿದೆ. ಘಟನೆ ಹಿನ್ನೆಲೆ ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಹೊಂಡವನ್ನು ಮುಚ್ಚಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ.