ಬಳ್ಳಾರಿ: ಪೈಪ್ ಲೈನ್ ಪರಿಶೀಲನೆ ಮಾಡುತ್ತಿದ್ದ ವೇಳೆ ನೀರಿನ ಹೊಂಡದಲ್ಲಿ (Water Tanker) ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಜಿಂದಾಲ್ ಕಾರ್ಖಾನೆಯಲ್ಲಿ (Jindal Factory) ನಡೆದಿದೆ.
ಘಟನೆಯಲ್ಲಿ ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಐಪಿಎಲ್ನಲ್ಲಿ ಮನರಂಜನೆ ಮಾತ್ರವಲ್ಲ ಜಾಗೃತಿಯೂ ಉಂಟು – ಗಿಲ್ ಪಡೆ ಲ್ಯಾವೆಂಡರ್ ಜೆರ್ಸಿ ಧರಿಸಿ ಕಣಕ್ಕಿಳಿಯೋದು ಏಕೆ?
ಪೈಪ್ಲೈನ್ ಪರಿಶೀಲನೆ ಮಾಡುತ್ತಿದ್ದ ವೇಳೆ ನೀರು ರಭಸವಾಗಿ ಹರಿದಿದೆ. ನೀರಿನ ರಭಸಕ್ಕೆ ಸಿಕ್ಕಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ತೋರಣಗಲ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸಾವು:
ಕೊಪ್ಪಳ (Koppal) ಜಿಲ್ಲೆ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಂಡ್ಪವರ್ ಕಂಪನಿ ನಿರ್ಲಕ್ಷ್ಯದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈರಪ್ಪ ಕುರಿ (55) ಮೃತ ವ್ಯಕ್ತಿ. ಮೇಕೆಗಳನ್ನು ಮೇಯಿಸಲು ಹೋದಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಗರದ ಹೆಸರು ಹೇಳಿದಾಗ ಬಾಯಿಗೆ ಕೆಟ್ಟ ರುಚಿ ಬರುತ್ತೆ: ‘ಅಕ್ಬರ್ಪುರ’ ಹೆಸರು ಬದಲಾವಣೆ ಸುಳಿವು ಕೊಟ್ಟ ಯೋಗಿ
ಕುಕನೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೇ ವೇಳೆ ಸ್ಥಳೀಯರನ್ನು ವಿಚಾರಿಸಿದಾಗ ವಿಂಡ್ ಪವರ್ ಕಂಪನಿ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ದೂರಿದ್ದಾರೆ. ಜೊತೆಗೆ ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿ ಪರಿಹಾರ ನೀಡಬೇಕು ಒತ್ತಾಯಿಸಿದ್ದಾರೆ.