ಚಾಮರಾಜನಗರ: ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ (South States) ಆನೆ-ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಞಾಕವಾಗಿ ಪರಿಹಾರೋಪಾಯಗಳನ್ನು ರೂಪಿಸಲು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರ ಪ್ರದೇಶದ ಗಡಿ ಅರಣ್ಯ ಪ್ರದೇಶಗಳಲ್ಲಿ (Forest) ಏಕಕಾಲದಲ್ಲಿ 3 ದಿನಗಳ ಕಾಲ ಆನೆ ಗಣತಿ ನಡೆಸಲು ಅರಣ್ಯ ಇಲಾಖೆ (Forest Department) ಮುಂದಾಗಿದೆ.
ಹೌದು. ನೀಲಗಿರಿ ಶ್ರೇಣಿಯ ಸಂರಕ್ಷಿತ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮಾನವ ಆನೆ ಸಂಘರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾನವ ಸಂಘರ್ಷ ತಡೆಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಅರಣ್ಯ ಇಲಾಖೆಗಳು ಅಂತರರಾಜ್ಯ ಸಮನ್ವಯ ಸಮಿತಿ ರಚಿಸಿಕೊಂಡಿವೆ. ಸೂಕ್ತ ಯೋಜನೆ ರೂಪಿಸಲು ಹಾಗೂ ವೈಜ್ಞಾನಿಕ ಪರಿಹಾರೋಪಾಯ ಕಂಡುಕೊಳ್ಳಲು ಮುಂದಾಗಿವೆ. ಹಾಗಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜೊತೆಗೆ ಆಂಧ್ರಪ್ರದೇಶ ಗಡಿ ಭಾಗಗಳಲ್ಲಿನ ಆನೆಗಳ ಸಂಖ್ಯೆ ಪತ್ತೆ ಮಾಡುವ (Elephant Census) ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.
ಪ್ರಮುಖವಾಗಿ ರಾಜ್ಯದ ಬಂಡೀಪುರ, ನಾಗರಹೊಳೆ, ಕಾವೇರಿ ವನ್ಯಧಾಮ, ಮಲೆಮಹದೇಶ್ವರ ವನ್ಯಧಾಮದಲ್ಲಿ ಆನೆ ಗಣತಿ ನಡೆಯಲಿದೆ. ಅಲ್ಲದೇ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮಡಿಕೇರಿ ವನ್ಯಜೀವಿಧಾಮ ಹಾಗೂ ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಆನೆಗಣತಿ ನಡೆಸಲಾಗುತ್ತದೆ. ಜೊತೆಗೆ ನೆರೆಯ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸಂಯೋಜಿತ ಆನೆಗಳ ಸಂಖ್ಯೆ ಪತ್ತೆಗೆ ಗಣತಿ ನಡೆಸಲಾಗುತ್ತದೆ.
ಆನೆ ಗಣತಿ ನಡೆಸುವುದು ಹೇಗೆ?
ಆನೆ ಗಣತಿಗೆ ವಿವಿಧ ವಿಧಾನಗಳನ್ನು ಅನುಸರಿಲಾಗುತ್ತದೆ. ಆನೆಯ ಲದ್ದಿಯ ಮಾದರಿ ಸಂಗ್ರಹ ಮಾಡೋದು. ಅರಣ್ಯ ಪ್ರದೇಶವನ್ನು ಬ್ಲಾಕ್ಗಳನ್ನಾಗಿ ವಿಂಗಡಿಸಿ ಸಿಬ್ಬಂದಿ ನಿಯೋಜಿಸಿ ಗಣತಿ ಮಾಡೋದು. ಗುಂಪಿನಲ್ಲಿ ಕಾಣುವ ಆನೆಗಳ ಛಾಯಾಚಿತ್ರ ತೆಗೆದು ಆನೆಗಣತಿ ಮಾಡೋದು ಹೀಗೆ ನಾನಾ ಮಾರ್ಗಗಳಲ್ಲಿ ಆನೆ ಗಣತಿ ನಡೆಸಲಾಗುತ್ತದೆ.
ಆನೆ ಗಣತಿ ಕಾರ್ಯದಲ್ಲಿ ಈ ಬಾರಿ ಸ್ವಯಂ ಸೇವಕರಿಗೆ ಅವಕಾಶ ಇಲ್ಲವಾಗಿದ್ದು, ಅರಣ್ಯ ಸಿಬ್ಬಂದಿಗೆ ಮಾತ್ರ ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆನೆಗಳ ಅಂಕಿ-ಅಂಶಗಳ ಪತ್ತೆ ಜೊತೆಗೆ ಆನೆ ಕಾರಿಡಾರ್ಗಳನ್ನು ಪುನರ್ ಸ್ಥಾಪಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ.