ಮಂಡ್ಯ: ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ನಾರಾಯಣ ಗೌಡ ಮೂರು ದಿನದ ಹಿಂದೆಯೇ ಮನೆ ಖಾಲಿ ಮಾಡಿ ವಸ್ತುಗಳನ್ನು ಮುಂಬೈಗೆ ಸಾಗಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ನಾರಾಯಣ ಗೌಡ ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದು, ಕ್ಷೇತ್ರದಲ್ಲಿ ಸ್ವಂತ ಮನೆ ಹೊಂದಿರಲಿಲ್ಲ. ಹೀಗಾಗಿ ಕ್ಷೇತ್ರದ ಜನರ ಭೇಟಿಗಾಗಿ ಕೆ.ಆರ್.ಪೇಟೆಯ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆ/ಕಚೇರಿ ಮಾಡಿಕೊಂಡಿದ್ದರು.
ಜುಲೈ 3ರ ರಾತ್ರಿಯೇ ಮನೆಯಲ್ಲಿದ್ದ ಪೀಠೋಪಕರಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಖಾಲಿ ಮಾಡಿಸಿ, ಮುಂಬೈಗೆ ಸಾಗಿಸಲಾಗಿತ್ತು. ಏಕಾಏಕಿ ಮನೆ ಖಾಲಿ ಮಾಡಿದ ಶಾಸಕರ ನಡೆಯಿಂದ ಜೆಡಿಎಸ್ ಕಾರ್ಯಕರ್ತರು ಈಗ ಶಾಕ್ ಆಗಿದ್ದಾರೆ.
ಮೂರು ದಿನದ ಹಿಂದೆಯೇ ಮನೆ ಖಾಲಿ ಮಾಡಿರುವುದನ್ನು ನೋಡಿದಾಗ ಪಕ್ಕಾ ಪ್ಲಾನ್ ಮಾಡಿ ಬಜೆಟ್ ಮುಗಿದ ಮರುದಿನ ರಾಜೀನಾಮೆ ನೀಡುವ ನಿರ್ಧಾರ ಮೊದಲೇ ತೀರ್ಮಾನವಾಗಿತ್ತು ಎನ್ನುವುದು ಖಚಿತವಾಗುತ್ತದೆ. ಮೊದಲೇ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದ ನಾಯಕರು ಶನಿವಾರ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದಾರೆ.