ಉಡುಪಿ: 800 ವರ್ಷಗಳ ಹಿಂದೆ ಮಧ್ವಾಚಾರ್ಯ ರಿಂದ ಸ್ಥಾಪನೆಯಾದ ಶ್ರೀಕೃಷ್ಣ ಮಠದಲ್ಲಿ ಮಕರ ಸಂಕ್ರಾಂತಿಯ ದಿನದಂದು ಸಂಭ್ರ ಏಕಕಾಲದಲ್ಲಿ ಮೂರು ತೇರುಗಳ ಉತ್ಸವ ನಡೆಯಿತು.
ಆರಂಭದಲ್ಲಿ ತೆಪ್ಪೋತ್ಸವ, ನಂತರ ಪಲ್ಲಕ್ಕಿಯಲ್ಲಿ ದೇವರನ್ನು ತಂದು ಮೂರು ರಥಗಳಲ್ಲಿ ಉತ್ಸವ ಮಾಡಲಾಯ್ತು. ಸಾವಿರಾರು ಮಂದಿ ಈ ದಿನದ ಆಚರಣೆಗೆ ಸಾಕ್ಷಿಯಾದರು. ಎಂಟು ಮಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದ್ಯುದ್ದೀಪಾಲಂಕಾರ, ಸಾಂಪ್ರದಾಯಿಕ ಪಟಾಕಿ, ವೈಭವದ ಮೆರವಣಿಗೆ ಸಂಕ್ರಾಂತಿಯ ವಿಶೇಷವಾಗಿತ್ತು.
ಈ ಬಾರಿ ತೆಪ್ಪವನ್ನು ರಥದ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಸಂಕ್ರಾಂತಿ ಸಂದರ್ಭದಲ್ಲಿ ನಡೆದ ತೆಪ್ಪೋತ್ಸವದಲ್ಲಿ ಸ್ವಾಮೀಜಿಗಳು ತೆಪ್ಪ ನಡೆಸಿದ್ದು ವಿಶೇಷವಾಗಿತ್ತು. ಪರ್ಯಾಯ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಧ್ವ ಸರೋವರದಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿದರು. ಮಧ್ವ ಸರೋವರದಲ್ಲಿ ನಡೆದ ದೇವರ ತೆಪ್ಪೋತ್ಸವಕ್ಕೆ ಸ್ವಾಮೀಜಿಗಳೇ ದೋಣಿ ಚಲಾಯಿಸಿದ್ದು ವಿಶೇಷವಾಗಿತ್ತು.
ಶ್ರೀ ಕೃಷ್ಣ ಮಠದಲ್ಲಿ ನಡೆದ ಮಕರ ಸಂಕ್ರಮಣದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಮಂತ್ರಾಲಯದ ಮಠಾಧೀಶರಾದ ಶ್ರೀ ವಿಬುಧೇಂದ್ರ ತೀರ್ಥ ಶ್ರೀಪಾದರು, ರಾಮೋಹಳ್ಳಿಯ ಶ್ರೀ ವಿಶ್ವಭೂಷಣ ಶ್ರೀಪಾದರು ಉಪಸ್ಥಿತರಿದ್ದರು.