ಜೈಪುರ್: ಶ್ರೀರಾಮನ ಬಗ್ಗೆ ಭಕ್ತಿ ತೋರಿಸಿದ ಬಿಜೆಪಿಗರು ಕ್ರಮೇಣ ದುರಹಂಕಾರಿಗಳಾಗಿ ಬದಲಾದರು. ಇದಕ್ಕೆ ಶ್ರೀರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದ ಎಂದು ಬಿಜೆಪಿ (BJP) ವಿರುದ್ಧ ಆರ್ಎಸ್ಎಸ್ (RSS) ನಾಯಕ ಇಂದ್ರೇಶ್ ಕುಮಾರ್ (Indresh Kumar) ವಾಗ್ದಾಳಿ ನಡೆಸಿದ್ದಾರೆ. ಜೈಪುರ್ (Jaipur) ಸಮೀಪದ ಕನೋಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗದ ವಿಚಾರವಾಗಿ ಅವರು ಪ್ರತಿಕ್ರಿಸಿದ್ದಾರೆ.
ಇದೇ ವೇಳೆ ಐ.ಎನ್.ಡಿ.ಐ.ಎ ಮೈತ್ರಿಕೂಟದ ವಿರುದ್ಧ ಸಹ ಅವರು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟದ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ರಾಮ ವಿರೋಧಿ ಎಂದು ಕರೆದ ಅವರು, ರಾಮನ ಮೇಲೆ ನಂಬಿಕೆಯಿಲ್ಲದವರನ್ನು 234 ಸ್ಥಾನಗಳಿಗೆ ನಿಲ್ಲಿಸಲಾಯಿತು. ದೇವರ ಈ ನ್ಯಾಯ ಸಂತೋಷ ತಂದಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಬಂದ ಕುಮಾರಸ್ವಾಮಿಗೆ ಏರ್ಪೋರ್ಟ್ ಬಳಿ ಅದ್ದೂರಿ ಸ್ವಾಗತ
ಇತ್ತೀಚೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ಘನತೆ ಹಾಗೂ ಮಾನವೀಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದರು. ಇದಾದ ಕೆಲವು ದಿನಗಳ ನಂತರ ಇಂದ್ರೇಶ್ ಕುಮಾರ್ ಅವರು ಈ ಮಾತುಗಳನ್ನ ಆಡಿದ್ದಾರೆ.
ಭಾಗವತ್ ಅವರು, ನಿಜವಾದ ಸೇವಕನು ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ನಾನು ಈ ಕೆಲಸ ಮಾಡಿದ್ದೇನೆ ಎಂದು ಹೇಳುವ ಅಹಂಕಾರವನ್ನು ಹೊಂದಿರುವುದಿಲ್ಲ. ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಕರೆಯಬಹುದು. ಅಲ್ಲದೇ ಸಾರ್ವಜನಿಕ ಜೀವನದಲ್ಲಿ ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಜನರ ಬಗ್ಗೆ ನಮ್ರತೆ ಮತ್ತು ಸದ್ಭಾವನೆ ಅಗತ್ಯವಾಗಿ ಇರಬೇಕು ಎಂದಿದ್ದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದರೂ, ಮಿತ್ರಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಈ ಮೂಲಕ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಮಾಲ್ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ