ನವದೆಹಲಿ: ಜನರ ಈ ರೀತಿಯ ಹಿಂಸಾತ್ಮಕ ನಡೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಈಗ ಪ್ರತಿಭಟಿಸುತ್ತಿರುವವರು ಮುಂದೆ ಹೆಚ್ಚಿನ ಬೆಲೆ ತೆರಬೇಕಾಗಬಹುದು ಎಂದು ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರತಿಭಟಿಸುತ್ತಿರುವವರಿಗೆ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಎಚ್ಚರಿಕೆ ನೀಡಿದ್ದಾರೆ.
ನಾವು ಈ ರೀತಿಯ ಹಿಂಸಾಚಾರವನ್ನು ಖಂಡಿಸುತ್ತೇವೆ, ಇದು ಪರಿಹಾರವಲ್ಲ. ಹಿಂಸಾಚಾರ ಹೀಗೆಯೇ ಮುಂದುವರಿದರೆ, ಪೊಲೀಸರ ಕೈಗೆ ಕೆಲಸ ಕೊಡಬೇಕಾಗುತ್ತದೆ. ಹಿಂಸಾಚಾರದಲ್ಲಿ ಭಾಗಿಯಾದವರು ಪೊಲೀಸರ ಕೈಗೆ ಸಿಕ್ಕರು ಎಂದಾದರೆ, ಅವರಿಗೆ ಸುಲಭದಲ್ಲಿ ಕ್ಲಿಯರೆನ್ಸ್ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ʼಅಗ್ನಿಪಥʼ ಹಿಂಸಾಚಾರ – ಪ್ರತಿಭಟನಾಕಾರರಿಗೆ ಆಸ್ಪತ್ರೆಯಿಂದಲೇ ಸೋನಿಯಾ ಗಾಂಧಿ ಮನವಿ
ಅಗ್ನಿಪಥ್ ಯೋಜನೆ ಒಂದು ಸಕಾರಾತ್ಮಕ ಹೆಜ್ಜೆ. ಈ ಯೋಜನೆ ಬಗ್ಗೆ ಕಾಳಜಿ ಇರುವವರು ಹತ್ತಿರದ ಸೇನಾ ಕೆಂದ್ರ, ವಾಯುಪಡೆ ಅಥವಾ ನೌಕಾನೆಲೆಯನ್ನು ಸಂಪರ್ಕಿಸಿ, ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜನರು ಪ್ರತಿಭಟಿಸುವುದಕ್ಕೂ ಮೊದಲು ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಯೋಜನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ, ಆಗ ಮಾತ್ರ ಯೋಜನೆಯ ಪ್ರಯೋಜನ ಏನೆಂಬುದು ತಿಳಿಯುತ್ತದೆ. ಜನರ ಎಲ್ಲಾ ಅನುಮಾನಗಳನ್ನೂ ಇದು ನಿವಾರಿಸುತ್ತದೆ ಎಂಬುದು ನನಗೆ ಖಾತ್ರಿಯಿದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಿದ ಸಿಎಂ
ಸಂಪೂರ್ಣ ಯೋಜನೆಯನ್ನು ಒಮ್ಮೆ ಗಮನಿಸಿದರೆ, ಅದರಲ್ಲಿ ಹಲವು ಪ್ರಯೋಜನಗಳಿರುವುದು ತಿಳಿಯುತ್ತದೆ. ಅದರಲ್ಲಿ ಯುದ್ಧದ ಡೋಮೇನ್ಗಳು ಬದಲಾಗುತ್ತಿವೆ. ಸೇವೆಯಲ್ಲಿ ಕಿರಿಯ ಹಾಗೂ ತಂತ್ರಜ್ಞಾನದ ಬಗ್ಗೆ ತಿಳಿದಿರುವವರು ಬೇಕಿದ್ದಾರೆ. ಅಗ್ನಿವೀರರಿಗೆ 2-3 ಆಯ್ಕೆಗಳೂ ಇವೆ. 4 ವರ್ಷ ಸೇವೆ ಸಲ್ಲಿಸಿದ ಬಳಿಕ ವಾಯುಪಡೆಗೆ ಮರುನೋಂದಣಿಯೂ ಮಾಡಿಕೊಳ್ಳಬಹುದು. ಅವರಿಗೆ ಪಿಂಚಣಿ ಸೌಲಭ್ಯ ಇದೆ. ಉನ್ನತ ಶಿಕ್ಷಣ ಮುಂದುವರಿಸಲು ಬಯಸುವವರಿಗೂ ಅವಕಾಶ ಇದೆ. ಸ್ವಂತ ಉದ್ಯಮ ಸ್ಥಾಪಿಸಲು ಬಯಸುವವರು ಅದನ್ನೂ ಮಾಡಬಹುದು. ಅವರಿಗೆ ಖಾಸಗಿ ಅಥವಾ ಸರ್ಕಾರಿ ವಲಯದಲ್ಲಿ ಉದ್ಯೋಗವೂ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದರು.