ಕೊಲಂಬೊ: ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗಾ ಪತ್ನಿ ಹಾಗೂ ಆಲ್ ರೌಂಡರ್ ತಿಸಾರ ಪೆರೆರಾರ ನಡುವಿನ ಸಾಮಾಜಿಕ ಜಾಲತಾಣದ ಕದನ ಹೆಚ್ಚಾಗಿದ್ದು, ಸದ್ಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪೆರೆರಾ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಮಾಲಿಂಗಾ ಪತ್ನಿ ತಾನ್ಯಾ ಪೆರೆರಾ ಫೇಸ್ಬುಕ್ ಖಾತೆಯಲ್ಲಿ ತಿಸಾರರನ್ನು ಟಾರ್ಗೆಟ್ ಮಾಡಿ ಪೋಸ್ಟ್ ಪ್ರಕಟಿಸಿದ್ದರು. ಇದರಲ್ಲಿ ತಿಸಾರ ಪೆರೆರಾ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಶ್ರೀಲಂಕಾದ ಕ್ರೀಡಾ ಸಚಿವರನ್ನು ಭೇಟಿಯಾಗಿದ್ದರು ಎಂದು ಬರೆದುಕೊಂಡಿದ್ದರು.
ತಾನ್ಯಾರ ಈ ಪೋಸ್ಟ್ ಗೆ ತಿರುಗೇಟು ನೀಡಿದ್ದ ತಿಸ್ಸಾರ ಪೆರಾರ, ಕ್ಯಾಲೆಂಟರ್ ವರ್ಷದಲ್ಲಿ ತಾವು ಮಾಡಿದ ಸಾಧನೆಗಳ ಪಟ್ಟಿ ಮಾಡಿ ತಂಡದಲ್ಲಿ ಸ್ಥಾನ ಪಡೆಯಲು ತಮ್ಮ ಉತ್ತಮ ಪ್ರದರ್ಶನವೇ ಕಾರಣ ಎಂದು ಟಾಂಗ್ ನೀಡಿದ್ದರು. ಇದರ ಬಳಿಕವೂ ತಾನ್ಯಾ ಅವರು, ತಿಸಾರರನ್ನು ಟಾರ್ಗೆಟ್ ಮಾಡಿ ಮತ್ತೊಂದು ಪೋಸ್ಟ್ ಮಾಡಿದ್ದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉಂಟಾಗುತ್ತಿರುವ ಚರ್ಚೆಗೆ ಬ್ರೇಕ್ ಹಾಕಲು ಮುಂದಾಗಿರುವ ತಿಸಾರ ಪೆರೆರಾ ಶ್ರೀಲಂಕಾ ಕ್ರಿಕೆಟ್ ಬೋರ್ಡಿನ ಸಿಇಒ ಆಶ್ಲೇ ಡಿ ಸಿಲ್ವಾ ಅವರಿಗೆ ಪತ್ರ ಬರೆದಿದ್ದಾರೆ. ಕೆಲವರ ವೈಯಕ್ತಿಕ ದ್ವೇಷಕ್ಕೆ ತಂಡದ ಸಾಮರಸ್ಯ ಹಾಳಾಗುತ್ತಿದೆ. ಇಡೀ ದೇಶಕ್ಕೆ ನಾವು ನಗುವ ವಸ್ತುವಾಗಿದ್ದೇವೆ ಎಂದು ತಿಳಿಸಿ ಪ್ರಕರಣದಲ್ಲಿ ಮಧ್ಯಪ್ರವೇಶದ ಮಾಡುವಂತೆ ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv