ಧಾರವಾಡ: ವಿದ್ಯಾಕಾಶಿ ಧಾರವಾಡದ ಮಹೇಶ ಪಿಯು ಕಾಲೇಜಿನ ವಿಶೇಷ ಚೇತನ ವಿದ್ಯಾರ್ಥಿಯೊಬ್ಬರು ಶೇಕಡಾ 93 ಅಂಕ ಪಡೆದಿದ್ದಾರೆ.
ಮೂಲತಃ ಕಾರವಾರದ ಕದ್ರಾದವರಾದ ಶಿವಯೋಗಿ ಶೆಟ್ಟಿ ಈ ಸಾಧನೆ ಮಾಡಿದವರು. ಕಿವಿ ಕೇಳಿಸಿ, ಮಾತನಾಡೊಕೆ ಬಂದ್ರೂ ಈ ಸಾಧನೆ ಮಾಡೊಕೆ ಆಗದ ವಿದ್ಯಾರ್ಥಿಗಳ ಮುಂದೆ ಇವರು ಶೇಕಡಾ 93 ರಷ್ಟು ಅಂಕ ಪಡೆದು ಸೈ ಎನಿಸಿಕೊಂಡಿದ್ದಾರೆ.
ಹುಟ್ಟಿನಿಂದ ಶಿವಯೋಗಿಗೆ ಕಿವಿ ಕೇಳಿಸಲ್ಲ. ಹೀಗಾಗಿ ಮಾತನಾಡೊಕೆ ಕೂಡಾ ಆಗಲ್ಲ. ಆದರೂ, ಪ್ರತಿಭೆಯ ಪ್ರತಿರೂಪವಾದ ಶಿವಯೋಗಿ ಶೆಟ್ಟಿ, ಎಸ್ ಎಸ್ ಎಲ್ ಸಿ 97 ರಷ್ಟು ಅಂಕ ಪಡೆದಿದ್ದರು. ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ ಪರೀಕ್ಷೆಯಲ್ಲಿ 558 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ಪಾಸಾಗುವ ಮೂಲಕ ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾರೆ.
ಈ ತರದ ಮಕ್ಕಳಿಗೆ ಶಾಲೆಯಲ್ಲಿ ಸಹಾಯ ಸಿಗುವುದೇ ಕೆಲವೆಡೆ ಮಾತ್ರ. ಅಂತದ್ದರದಲ್ಲಿ ಮಹೇಶ್ ಕಾಲೇಜಿನ ಪ್ರತಿಯೊಬ್ಬ ಶಿಕ್ಷಕರು ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಇಂತಹ ಮಕ್ಕಳಿಗೆ ಶಿಕ್ಷಕರ ಬೆಂಬಲವಿದ್ದಲ್ಲಿ ಮುಂದು ಬರುತ್ತಾರೆ ಅನ್ನೋದಕ್ಕೆ ನನ್ನ ಮಗನೇ ಸಾಕ್ಷಿ ಅಂತಾ ಶಿವಯೋಗಿ ತಾಯಿ ನಾಗರತ್ನ ಅಭಿಪ್ರಾಯಿಸಿದ್ದಾರೆ.
ಶಿವಯೋಗಿ ಶಾಲೆಗೆ ಪ್ರವೇಶ ನೀಡುವಾಗಲೇ ಎಲ್ಲರ ಜೊತೆ ಬೆರೆಯುವಂತೆ ಸಮಾನತೆ ಕೊಟ್ವಿ. ಶ್ರವಣ ದೋಷ ಇದ್ದುದರಿಂದ ಆತನಿಗೆ ತರಗತಿ ಮುಗಿದ ಬಳಿಕ ಮತ್ತೆ ಪಾಠವನ್ನು ಉಪನ್ಯಾಸಕರು ಹೇಳಿಕೊಡುತ್ತಿದ್ದರು. ಹೀಗಾಗಿ ವಿಜ್ಞಾನ ವಿಭಾಗದಲ್ಲಿ ಇಂದು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾನೆ. ಮನುಷ್ಯ ಛಲಗಾರನಿರಬೇಕು. ಸತತ ಪರಿಶ್ರಮ ಪಟ್ಟಲ್ಲಿ ಮಾತ್ರ ಯಶಸ್ಸು ಸಾಧ್ಯ ಅಂತಾ ಕಾಲೇಜಿನ ಪ್ರಾಂಶುಪಾಲ ಉಮೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.