ಬೆಂಗಳೂರು: ಕನ್ನಡದ ಜನಪ್ರಿಯ ಟಿವಿ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಕಳೆದ ವಾರದಿಂದ ಆರಂಭವಾಗಿದೆ. ಈಗ ಈ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ತಂಡ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಮಾತನಾಡಿದ ಖಾಸಗಿ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು, ನಮ್ಮ ನಾಡಿನಲ್ಲಿ ಹುಟ್ಟಿ ಬೇರೆ ಕಡೆ ಹೆಸರು ಮಾಡಿದ ಸಾಧಕರನ್ನು ಕರೆ ತರುವ ಯೋಚನೆ ಮಾಡುತ್ತಿದ್ದೇವೆ. ಅವರನ್ನು ಕಾರ್ಯಕ್ರಮಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ರಾಜ್ಯದಲ್ಲಿ ಹುಟ್ಟಿ ಬೇರೆ ಕಡೆ ಹೆಸರು ಮಾಡಿದ ವ್ಯಕ್ತಿಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನುವ ವಿಚಾರ ಹೊರಬರುತ್ತಿದ್ದಂತೆ ಅನುಷ್ಕಾ ಶೆಟ್ಟಿ, ಐಶ್ವರ್ಯಾ ರೈ, ಸುನಿಲ್ ಶೆಟ್ಟಿ ಬರುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.
ಮೂಲಗಳ ಪ್ರಕಾರ ವೀಕೆಂಡ್ ವಿತ್ ರಮೇಶ್ ತಂಡ ಅನುಷ್ಕಾ ಶೆಟ್ಟಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅನುಷ್ಕಾ ಶೆಟ್ಟಿ ಅವರು ಇದಕ್ಕೆ ಒಪ್ಪಿದ್ದಾರಾ, ಇಲ್ಲವಾ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಅನುಷ್ಕಾ ಶೆಟ್ಟಿ ಅಲ್ಲದೇ ರಜನಿಕಾಂತ್, ಐಶ್ವರ್ಯ ರೈ ಬಚ್ಚನ್, ಎಸ್.ಎಸ್ ರಾಜಮೌಳಿ, ರಾಹುಲ್ ಡ್ರಾವಿಡ್ ಅವರನ್ನು ಕರೆ ತರಲು ವೀಕೆಂಡ್ ವಿತ್ ರಮೇಶ್ ತಂಡ ಮುಂದಾಗುತ್ತಿದೆ.
4ನೇ ಸೀಸನ್ನ ಮೊದಲ ಸಂಚಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ಅತಿಥಿಯಾಗಿ ಭಾಗವಹಿಸಿದ್ದರು. ಇದುವರೆಗೆ ವೀಕೆಂಡ್ ವಿತ್ ರಮೇಶ್ ತಂಡ ನಡೆಸಿದ ಅವಿರತ ಪ್ರಯತ್ನದ ಫಲವಾಗಿ ವೀರೇಂದ್ರ ಹೆಗಡೆಯವರು ಬಂದಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ನಟಿ ಪ್ರೇಮ, ಮಾಲಾಶ್ರೀ, ರಾಘಣ್ಣ ಬರಲಿದ್ದಾರೆ.