ಬೆಂಗಳೂರು: ಪೈರಸಿ ಒಂದು ಚಿತ್ರವನ್ನು ಹೇಗೆ ನಾಶ ಮಾಡುತ್ತದೆ? ಪೈರಸಿಯಿಂದ ಚಿತ್ರತಂಡದ ಮೇಲಾಗುವ ಪರಿಣಾಮ ಎಂಬುದರ ಬಗ್ಗೆ ನಟಿ ಸುಮನ್ ನಗರ್ಕರ್ ಶಾರ್ಟ್ ಫಿಲ್ಮ್ ನಲ್ಲಿ ಮನಸ್ಸಿಗೆ ತಾಗುವಂತೆ ಹೇಳಿದ್ದಾರೆ.
ಈ ಶಾರ್ಟ್ ಫಿಲ್ಮ್ ನಲ್ಲಿ ಸುಮನ್ ನಗರ್ಕರ್ ನಟನೆಯ `ಮೌನ’ ಸಿನಿಮಾ ಬಿಡುಗಡೆ ಆಗಿರುತ್ತದೆ. ಸಿನಿಮಾ ಬಿಡುಗಡೆ ವೇಳೆ ನಟಿ ಪ್ರೇಕ್ಷಕರ ಬರುವಿಕೆಗಾಗಿ ಚಿತ್ರಮಂದಿರದ ಹೊರಗಡೆಯೇ ಕುಳಿತಿರುತ್ತಾರೆ. ಈ ವೇಳೆ ಸುಮನ್ ಅವರ ಆತ್ಮಸಾಕ್ಷಿ ಎದುರಿಗೆ ಬರುತ್ತದೆ. ಆತ್ಮಸಾಕ್ಷಿಯ ಪ್ರತಿಯೊಂದು ಮಾತುಗಳು ನೋಡುಗರನ್ನು ತಲುಪುತ್ತವೆ. ಒಂದು ವಸ್ತು ಹುಟ್ಟಿದರೆ ಅದರ ಹಿಂದೆ ಕೆಲವೇ ನಿಮಿಷಗಳಲ್ಲಿ ಆ ವಸ್ತುವಿನ ನಕಲು ತಯಾರಾಗುತ್ತದೆ ಎಂಬ ಅರ್ಥಗರ್ಭಿತ ಮಾತನ್ನು ಹೇಳುತ್ತದೆ.
ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕೂಡಲೇ ಕೆಲವರು ಅದರ ಪೈರಸಿ ಮಾಡುತ್ತಾರೆ. ಹಾಗೇ ಸಿನಿಮಾ ದಿನವೇ ಸುಮನ್ ನಟನೆಯ `ಮೌನ’ ಚಿತ್ರದ ಪೈರಸಿ ಆಗಿರುತ್ತದೆ. ಮೌನ ಸಿನಿಮಾ ನೋಡಲು ಬಂದವರು ಸಹ ಮೊಬೈಲ್ನಲ್ಲಿ ಸಿನಿಮಾದ ಲಿಂಕ್ ನೋಡಿ ಬೇರೆ ಫಿಲ್ಮ್ ನೋಡಲು ಹೋಗುತ್ತಾರೆ. ಕೊನೆಗೆ ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆಯಲಾಗುತ್ತದೆ.
ಕೇವಲ 4 ನಿಮಿಷ 48 ಸೆಕಂಡ್ ಗಳಿರುವ `ಗ್ರೇ’ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಿನಿಮಾ ತೆರೆಗೆ ತರಲು ಕಷ್ಟಪಟ್ಟ ಚಿತ್ರತಂಡದ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಗ್ರೇ ಕಿರು ಚಿತ್ರಕ್ಕೆ ಸುಜಯ್ ರಾಮಯ್ಯ ನಿರ್ದೇಶನವಿದೆ. ಕಿರುಚಿತ್ರ ಶುಕ್ರವಾರ ಯುಟ್ಯೂಬ್ ಅಪ್ಲೋಡ್ ಆಗಿದ್ದು, ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.
ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ದೃವ ಸರ್ಜಾ ನಟನೆಯ `ಭರ್ಜರಿ’ ಸಿನಿಮಾಗೂ ಪೈರಸಿಯ ಬಿಸಿ ತಟ್ಟಿತ್ತು.