ರಾಯ್ಪುರ್: ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್ಗಢ್ ನ ರಾಯ್ಪುರ್ ಪೊಲೀಸರಿಂದ ಬಂಧನವಾಗಿದ್ದ ಜಿತೇಂದ್ರ ದೃವ(30) ಎಂಬ ಸೈಕೋ ಕಿಲ್ಲರ್ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿ ಆಕೆಯ ಮೇಲು ರೇಪ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
2015 ಏಪ್ರಿಲ್ 27 ರಂದು ಭೋಪಾಲ್ ನ ಗ್ರಾಮೀಣ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಪಿಂಗಳ ರಾಜ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಈಕೆಯ ಕೊಲೆ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಪಿಂಗಳ ರಾಜ್ ಅವರ ಪ್ರಿಯಕರ ರಾಕೇಶ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದರು. ಏಳು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಚಂದ್ರಶೇಖರ್ ಜಾಮೀನು ಪಡೆದು ಹೊರಬಂದಿದ್ದ.
ಏನಿದು ಘಟನೆ: ಜಿತೇಂದ್ರ ದೃವ ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಆತನ ಸಂಬಂಧಿಗಳ ಜೊತೆ ಛತ್ತೀಸ್ಗಢ್ ದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ತಿಂಗಳ ಹೆಣ್ಣು ಮಗುವಿನ ತಂದೆಯಾಗಿದ್ದಾನೆ.
ಪಿಂಗಳ ರಾಜ್ ಕೊಲೆ ಪ್ರಕರಣದಲ್ಲಿ ಚಂದ್ರಶೇಖರ್ ಜಿತೇಂದ್ರನನ್ನು ವಿಚಾರಣೆ ನಡೆಸಲು ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ನಂತರದಲ್ಲಿ ಪಿಂಗಳ ರಾಜ್ ಕೊಲೆ ಬಗ್ಗೆ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
11 ತಿಂಗಳಲ್ಲಿ 5 ಕೊಲೆ: ಪಿಂಗಳ ರಾಜ್ ರನ್ನು ಕೊಲೆ ಮಾಡಿ ತಪ್ಪಿಸಿಕೊಂಡ ನಂತರ ಮತ್ತೆ ಐವರನ್ನು ಕೊಲೆ ಮಾಡಿದ್ದು, 2016 ರಲ್ಲಿ ಆಗಸ್ಟ್ ನಲ್ಲಿ 50 ವರ್ಷದ ರುಕ್ಮಿಣಿ ಎಂಬವರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಇದನ್ನು ಕಂಡ ರುಕ್ಮಿಣಿ ಅವರ ಪುತ್ರಿ 20 ವರ್ಷದ ಪಾರ್ವತಿ ಯನ್ನು ಕೊಲೆ ಮಾಡಿ ಆಕೆಯ ದೇಹದ ಮೇಲೆ ಅತ್ಯಾಚಾರ ನಡೆಸಿದ್ದ.
ನಂತರದಲ್ಲಿ ಜುಲೈ 12 ರಂದು ಮಹೇಂದ್ರ ಸಿಂಗ್, ಉಷಾ ದಂಪತಿ ಹಾಗೂ ಅವರ ಮಕ್ಕಳಾದ ಮಹೇಶ್ (11), ತ್ರಿಲೋಕ್(13) ಮೇಲೆ ಕೊಲೆ ಯತ್ನ ನಡೆಸಿದ್ದ. ಈ ಘಟನೆಯಲ್ಲಿ ತ್ರಿಲೋಕ್ ಒಂದು ಕಣ್ಣು ಕಳೆದುಕೊಂಡು ಅಚ್ಚರಿ ರೀತಿಯಲ್ಲಿ ಬದುಕಿ ಉಳಿದಿದ್ದ.
ಸಿಕ್ಕಿಬಿದ್ದಿದ್ದು ಹೇಗೆ: ಸರಣಿ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಭೋಪಾಲ್ ಪ್ರದೇಶದ 3 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೇ 20 ರಿಂದ 30 ವರ್ಷದ ವ್ಯಕ್ತಿಗಳ ಚಟುವಟಿಕೆಗಳನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಇಬ್ಬರು ಕುಟುಂಬಗಳಿಗೂ ತಿಳಿದ ವ್ಯಕ್ತಿಯಾಗಿದ್ದರಿಂದ ಈತನ ಮೇಲೆ ಅನುಮಾನ ವ್ಯಕ್ತವಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಜಿತೇಂದ್ರ ದೃವ ಕೃತ್ಯಗಳು ಬೆಳಕಿಗೆ ಬಂದಿತ್ತು.