ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತ ಪೈಲಟ್ ಗ್ರೂಪ್ ಕ್ಯಾಪ್ಟನ್ ಕಬಂಪತಿ ನಚಿಕೇತ ಭಾರತದ ಮೊದಲ ಹಾಗೂ ಏಕೈಕ ಯುದ್ಧ ಕೈದಿ ಆಗಿದ್ರು. ಯುದ್ಧದ ಸಂದರ್ಭದಲ್ಲಿ ನಚಿಕೇತ ಅವರಿಗೆ ಕೇವಲ 26 ವರ್ಷ ವಯಸ್ಸು, ಭಾರತೀಯ ವಾಯುದಳದ ನಂ.9 ಸ್ಕ್ವಾರ್ಡನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ತಂಡ ಯುದ್ಧ ಪೀಡಿತ ಬಟಾಲಿಕ್ ವಲಯವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತ್ತು. ಈ ವೇಳೆ ಮಿಗ್ 27 ಫೈಟರ್ ಏರ್ ಕ್ರಾಫ್ಟ್ ಮೇಲೆ ಎದುರಾಳಿಗಳು ಕ್ಷಿಪಣಿ ದಾಳಿ ನಡೆಸಿದ ಸಂದರ್ಭದಲ್ಲಿ ನಚಿಕೇತ ನಡೆಸುತ್ತಿದ್ದ ಮಿಗ್ ವಿಮಾನದ ಇಂಜಿನ್ 17 ಸಾವಿರ ಎತ್ತರದಲ್ಲಿ ಕೈಕೊಟ್ಟಿತ್ತು. ಬೇರೆ ದಾರಿ ಇಲ್ಲದ ಕಾರಣ ನಚಿಕೇತ ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಕೆಳಕ್ಕೆ ಹಾರಿದ್ದರು.
- Advertisement 2
ಈ ವೇಳೆ ಇವರ ಸಹಾಯಕ್ಕೆ ಆಗಮಿಸಿದ್ದ ಮಿಗ್ 21 ಜೆಟ್ನ ಲೀಡರ್ ಅಜಯ್ ಅಹುಜಾರ ಮೇಲೂ ಕೂಡ ಪಾಕ್ ಕ್ಷಿಪಣಿ ದಾಳಿ ನಡೆಸಿತ್ತು. ಕೆಳಕ್ಕೆ ಬಿದ್ದಿದ್ದ ನಚಿಕೇತ ಅವರನ್ನು ಪಾಕ್ ಸೈನಿಕರು ವಶಕ್ಕೆ ಪಡೆಯಲು ಯತ್ನಿಸಿದ್ದರು. ಪಾಕ್ ಸೈನ್ಯಕ್ಕೆ ಸುಲಭವಾಗಿ ಸಿಗಲು ಇಚ್ಛಿಸದ ನಚಿಕೇತ ತಮ್ಮ ಸರ್ವೀಸ್ ಗನ್ ನಿಂದ ಪಾಕ್ ಸೈನಿಕರತ್ತ ಗುಂಡು ಹಾರಿಸಿದ್ದರು. ಆದರೆ ನಚಿಕೇತ ಗನ್ ಬುಲೆಟ್ ಖಾಲಿಯಾದ ಪರಿಣಾಮ ಪಾಕ್ ಸೈನಿಕರು ಅವರನ್ನು ವಶಕ್ಕೆ ಪಡೆದಿದ್ರು. ಆ ಬಳಿಕ ಅವರನ್ನು ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿ ಇಟ್ಟು ಹಿರಿಯ ಕಮಾಂಡರ್ ಆಗಮಿಸುವ ವೇಳೆಗೆ ಚಿತ್ರಹಿಂಸೆ ನೀಡಲಾಗಿತ್ತು.
- Advertisement 3
2016 ರಲ್ಲಿ ಈ ಬಗ್ಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಚಿಕೇತ ಅವರು, ಹಿರಿಯ ಕಮಾಂಡರ್ ಆಗಮಿಸುವವರೆಗೂ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೇ ನಾನು ಅವರ ವಿರುದ್ಧ ಆಗಸದಿಂದ ದಾಳಿ ನಡೆಸಿದ್ದ ಪರಿಣಾಮ ಕೊಲೆ ಮಾಡಲು ಕೂಡ ಉದ್ದೇಶಿಸಿದ್ದರು. ಆದರೆ ಹಿರಿಯ ಕಮಾಂಡರ್ ಬಂದ ವೇಳೆ ನಾನು ಸೆರೆ ಆಗಿರುವುದು ಅರಿವಾಗಿ ನನ್ನನ್ನು ಈ ರೀತಿ ನಡೆಸಿಕೊಳ್ಳದಂತೆ ತಿಳಿಸಿದ್ದರು. ಆ ಬಳಿಕ ಅವರು ಇತರೇ ಸೈನಿಕರನ್ನು ನಿಯಂತ್ರಿಸಿದ್ದರು. ಇದು ಅವರು ಮಾಡಿದ ದೊಡ್ಡ ಕಾರ್ಯವಾಗಿತ್ತು ಎಂದು ತಿಳಿಸಿದ್ದರು.
- Advertisement 4
ಪಾಕಿಸ್ತಾನ ಸೈನಿಕರಿಗೆ ಸೆರೆ ಸಿಕ್ಕ ಅವರು ನಾನು ಎಂದು ಭಾರತಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆ ಸಂದರ್ಭವನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಇಲ್ಲಿಗೆ ನನ್ನ ಜೀವನ ಕೊನೆ ಆಯ್ತು ಎಂದು ಭಾವಿಸಿದ್ದೆ. 3 ರಿಂದ 4 ದಿನಗಳಿಂದ ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಆದರೆ ನಾನು ಆ ದೇವರಿಗೆ ಋಣಿಯಾಗಿರುತ್ತೇನೆ. ಆ ಘಟನೆಯಿಂದ ನಾನು ಬದುಕಿ ಬಂದಿದ್ದೇನೆ ಎಂದು ತಿಳಿಸಿದ್ದರು.
ತನ್ನ ದೇಶದ ಸೈನಿಕ ಪಾಕಿಸ್ತಾನ ಕೈಯಲ್ಲಿ ಸೆರೆಯಾಗಿದ್ದಾರೆ ಎಂದು ತಿಳಿದ ಕೂಡಲೇ ಭಾರತ ವಿದೇಶಗಳಿಂದ ಪಾಕಿಸ್ತಾನದ ಮೇಲೆ ಒತ್ತಡ ತಂದಿತ್ತು. ಅಲ್ಲದೇ ವಿಶ್ವಸಂಸ್ಥೆ ಕೂಡ ಪಾಕಿಸ್ತಾನ ಮೇಲೆ ಒತ್ತಡ ಹಾಕಿದ್ದ ಪರಿಣಾಮ ಬೇರೆ ದಾರಿ ಇಲ್ಲದೇ ನಚಿಕೇತರನ್ನು 8 ದಿನಗಳ ಬಳಿಕ, ಅಂದರೆ ಜೂನ್ 1999ರಂದು ಬಿಡುಗಡೆ ಮಾಡಿತ್ತು.
ವಾಘಾ ಗಡಿಯಲ್ಲಿ ಪಾಕಿಸ್ತಾನ ನಚಿಕೇತರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ತವರಿಗೆ ಬಂದ ವೇಳೆ ಅವರ ಆರೋಗ್ಯ ಸ್ಥಿತಿ ಕೂಡ ಹದಗೆಟ್ಟಿತ್ತು. ಏಕೆಂದರೆ ಸುಮಾರು 18 ಸಾವಿರ ಅಡಿ ಎತ್ತರದಿಂದ ನೆಲಕ್ಕೆ ಜಿಗಿದ ಪರಿಣಾಮ ಗಾಯಗೊಂಡಿದ್ದರು. ಮನೆಗೆ ಹಿಂದಿರುಗಿದ ಬಳಿಕ ಸತತ ಮೂರು ವರ್ಷಗಳ ಕಾಲ ಅವರು ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಗ್ರೌಂಡ್ ಕೆಲಸ ನೀಡಲಾಗಿತ್ತು. 2003 ರಲ್ಲಿ ಮತ್ತೆ ಅವರು ಪೈಲಟ್ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಇವರ ಧೈರ್ಯ ಸಾಹಸ ಮೆಚ್ಚಿದ ಸರ್ಕಾರ 2000 ಇಸವಿಯಲ್ಲಿ ವಾಯು ಸೇನಾ ಪದಕವನ್ನು ನೀಡಿ ಗೌರವಿಸಿತ್ತು. ಕಾರ್ಗಿಲ್ ಯುದ್ಧದ ಸಂದರ್ಭ ನನಗೆ ಜೀವನ ಪಾಠ ಕಲಿಸಿಕೊಟ್ಟಿತ್ತು ಎಂದು ನಚಿಕೇತ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv