ಇದು ‘ಲೈಫ್ ಆಫ್ ಮೃದುಲ’ ಕಥೆ

Public TV
2 Min Read
Life of Mridala 3

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಲೈಫ್ ಆಫ್ ಮೃದುಲ’ (Life of Mridala) ಚಿತ್ರವನ್ನು ಮದನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮದನ್‌ಕುಮಾರ್.ಸಿ ನಾಯಕ ಮತು ನಿರ್ಮಾಪಕ. ಸಂಭಾಷಣೆ ಬರೆದಿರುವ ಯೋಗಿದೇವಗಂಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಇವರೊಂದಿಗೆ ತೇಜಸ್ವಿನಿ.ಆರ್.ಗೌಡ ಪ್ರೋತ್ಸಾಹವಿದೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಕೋಲಾರದ ಚೇತನ್ ತ್ರಿವೇಣ್ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಸಾಹಸ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ತಿಂಗಳು ಹಾಡುಗಳು ಹೊರಬಂದಿದ್ದು, ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಈಗ ಪ್ರಚಾರದ ಎರಡನೇ ಹಂತವಾಗಿ ಟ್ರೇಲರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ದತ್ತಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Life of Mridala 2

ಮೈಕ್ ತೆಗೆದುಕೊಂಡ ದತ್ತಣ್ಣ, ಇವತ್ತಿನ ಕಾಲಘಟ್ಟದಲ್ಲಿ ನಾವು ಒಳ್ಳೆ ಸಿನಿಮಾ ಮಾಡಿದ್ದೇವೆ. ಹೇಗಿರಬಹುದು ಎನ್ನುವ ಕುತೂಹಲವನ್ನು ಕೆರಳಿಸಲಿಕ್ಕೆ ಟ್ರೇಲರ್ ಅಂತ ಲಾಂಚ್ ಮಾಡುತ್ತಾರೆ. ಸೀಮಿತ ಉದ್ದೇಶದಿಂದ ಇಡೀ ವಿಚಾರವನ್ನು ಹೇಳುವ ಅಗತ್ಯವಿಲ್ಲ. ಎರಡ ಗಂಟೆ ಚಿತ್ರವನ್ನು ಎರಡು ನಿಮಿಷದಲ್ಲಿ ತೋರಿಸುವ ಪ್ರಕ್ರಿಯೆ, ಅದೇ ಸೃಜನಾತ್ಮಕ ಕಾರ್ಯವಿಧಾನವಾಗಿದೆ. ಇದರಲ್ಲಿ ನಿರ್ದೇಶಕ ಮತ್ತು ಸಂಕಲನಕಾರನ ಶ್ರಮ ನಿಜಕ್ಕೂ ಶ್ಲಾಘನೀಯ. ಅದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಬೇಕು. ಟ್ರೇಲರ್ ಪೂರಕವಾಗಿದ್ದು, ಸಿನಿಮಾ ನೋಡಬೇಕು ಅನಿಸೋ ರೀತಿಯಲ್ಲಿ ಸಿದ್ದ ಪಡಿಸಿದ್ದಾರೆ. ಮಾತು ಮುಂದುವರೆಸುತ್ತಾ, ನಾನೊಬ್ಬ ಕೆಟ್ಟ ವಿಮರ್ಶಕ. ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವನಲ್ಲ. ನಿರ್ದೇಶಕರು ಬೈಟ್ಸ್ ಕೊಡಬೇಕೆಂದು ಕೋರಿಕೊಂಡರು. ಚಿತ್ರ ನೋಡಿದ ಮೇಲೆ ಕೊಡುತ್ತೇನೆಂದು ಷರತ್ತು ಹಾಕಿದೆ. ನಂತರ ಎರಡು ಗಂಟೆ ಸಿನಿಮಾ ನನ್ನನ್ನು ನೋಡಿಸಿಕೊಂಡು ಹೋಯಿತು. ಈ ನೋಡಿಸಿಕೊಂಡು ಹೋಗುವುದು. ಅದು ಮೊದಲ ಶಕ್ತಿ. ಪುಸ್ತಕ ನೋಡುವಾಗ ಓದಿಸಿಕೊಂಡು ಹೋಗುತ್ತೆ. ಸಂಗೀತ ಕೇಳುವಾಗ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ರೀತಿಯಲ್ಲಿ ಮಾಡಿದ್ದಾರೆ. ಹೆಣ್ಣಿನ ತೊಳಲಾಟ, ಮಾನವೀಯ ಮುಖಗಳನ್ನು ರಕ್ಷಣೆ ಮಾಡುವ ರೀತಿಯನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರವು ಗಾಢವಾಗಿ ಮನಸ್ಸಿಗೆ ತಟ್ಟುತ್ತದೆ.  ಹೊಸಬರಾಗಿದ್ದರೂ ಕಲಾವಿದರ ಪ್ರತಿಭೆಯಲ್ಲಿ ಕೊರತೆ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ತೆರೆಗೆ ಬಂದಾಗ, ಅಲ್ಲಿ ಅವಕಾಶ ಸಿಕ್ಕರೆ ಮತ್ತಷ್ಟು ಮಾತನಾಡುವೆನೆಂದು ದತ್ತಣ್ಣ ವಿರಾಮ ತೆಗೆದುಕೊಂಡರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹರಿಪರಾಕ್ ಉಪಸ್ತಿತರಿದ್ದರು.

Life of Mridala 1

ಕಾಲ್ಪನಿಕ ಡಾರ್ಕ್ ಡ್ರಾಮಾ ಜಾನರ್‌ನ ಕಥೆಯಾಗಿದ್ದು, ಮೃದುಲಾ ಎಂಬುವಳ  ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳು ಬರುತ್ತದೆ. ಆಕೆಗೆ ಬದುಕಲ್ಲಿ ಅನಿರೀಕ್ಷಿತವಾಗಿ ಬರುವ ಸವಾಲನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಕುತೂಹಲ ತಿರುವುಗಳ ಮೂಲಕ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.

 

ನಾಯಕಿಯಾಗಿ ಪೂಜ ಲೋಕಪುರ್. ತಾರಾಗಣದಲ್ಲಿ ಆಶಾಸುಜಯ್, ಶಶಾಂಕ್, ಕುಲದೀಪ್, ಯೋಗಿದೇವಗಂಗೆ, ತೇಜಸ್ವಿನಿ.ಆರ್.ಗೌಡ, ಅನೂಪ್‌ಥಾಮಸ್, ಪ್ರೀತಿಚಿದಾನಂದ್, ಶರೀಫ್ ಮುಂತಾದವರು ನಟಿಸಿದ್ದಾರೆ. ಸಂಗೀತ ರಾಹುಲ್.ಎಸ್.ವಾಸ್ತರ್, ಛಾಯಾಗ್ರಹಣ ಅಚ್ಚುಸುರೇಶ್, ಸಂಕಲನ ವಸಂತಕುಮಾರ್.ಕೆ ಅವರದಾಗಿದೆ. ಬೆಂಗಳೂರು, ಕುಂದಾಪುರ ಸುಂದರ ತಾಣಗಳಲ್ಲಿ ೨೫ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ

Share This Article