ಭೋಪಾಲ್: ಬ್ಯಾಂಕ್ ನೋಟ್ ಪ್ರೆಸ್ನಿಂದ ಹಣ ಕಳ್ಳತನ ಮಾಡಿದ ಆರೋಪದ ಮೇಲೆ ಹಿರಿಯ ಅಧಿಕಾರಿಯೊಬ್ಬರುನ್ನು ಬಂಧಿಸಿರೋ ಘಟನೆ ಮಧ್ಯಪ್ರದೇಶದ ದೇವಸ್ನಲ್ಲಿ ನಡೆದಿದೆ.
ನೋಟು ಮುದ್ರಣಾಲಯದಿಂದ 90 ಲಕ್ಷ ರೂ. ಹಣ ಕಳ್ಳತನ ಮಾಡಿದ ಆರೋಪದ ಮೇಲೆ ನೋಟ್ ಇನ್ಸ್ಪೆಕ್ಷನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮನೋಹರ್ ವರ್ಮಾ ಅವರನ್ನು ಸಿಐಎಸ್ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ಅಧಿಕಾರಿಗಳು ಬಂಧಿಸಿದ್ದಾರೆ. ಸರ್ಕಾರದ ಎಲ್ಲಾ ನೋಟು ಮುದ್ರಣಾಲಯಗಳಲ್ಲಿ ಸಿಐಎಸ್ಎಫ್ ಅಧಿಕಾರಿಗಳು ರಕ್ಷಣೆ ಒದಗಿಸುತ್ತಾರೆ.
ವರ್ಮಾ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನ ಸಿಬ್ಬಂದಿಯೊಬ್ಬರು ನೋಡಿದ್ದರು. ಕಳೆದ ಗುರುವಾರದಿಂದ ವರ್ಮಾರನ್ನ ಸಿಸಿಟಿವಿಯಲ್ಲಿ ಗಮನಿಸುತ್ತಾ ಬಂದಿದ್ದರು. ತಿರಸ್ಕೃತ ನೋಟುಗಳಿದ್ದ ಮರದ ಬಾಕ್ಸ್ ಬಳಿ ವರ್ಮಾ ಆಗಾಗ ಹೋಗಿ ನಿಲ್ಲುತ್ತಿದ್ದುದ್ದು ಅನುಮಾನ ಮೂಡಿಸಿತ್ತು. ಶುಕ್ರವಾರ ಬೆಳಗ್ಗೆ ಮೂಲೆಯಲ್ಲಿದ್ದ ಖಾಲಿ ಬಾಕ್ಸ್ ನಲ್ಲಿ ವರ್ಮಾ ಏನೋ ಅಡಗಿಸಿ ಇಡುತ್ತಿರುವುದನ್ನ ನೋಡಿದ್ದರು. ಈ ಹಿನ್ನೆಲ್ಲೆಯಲ್ಲಿ ತಕ್ಷಣ ವರ್ಮಾನನ್ನು ಹಿಡಿದು ತಪಾಸಣೆ ಮಾಡಿದಾಗ 200 ಹಾಗೂ 500 ರೂ. ನೋಟಿನ ಕಂತೆಗಳನ್ನ ಬಟ್ಟೆ ಹಾಗೂ ಶೂನಲ್ಲಿ ಬಚ್ಚಿಟ್ಟುಕೊಂಡಿದ್ದು ಗೊತ್ತಾಗಿದೆ.
ವರ್ಮಾ ಕಚೇರಿಯನ್ನು ಶೋಧಿಸಿದಾಗ 26.09 ಲಕ್ಷ ರೂ. ಹೊಸ ನೋಟಿನ ಕಂತೆಗಳು ಸಿಕ್ಕಿವೆ. ಜೊತೆಗೆ ಅವರ ಮನೆಯ ಮೇಲೆ ದಾಳಿ ನಡೆಸಿದಾಗ ದಿಂಬು, ಹಾಸಿಗೆ ಮತ್ತು ಬಾತ್ರೂಮಿನಲ್ಲಿ ಒಟ್ಟು 64.50 ಲಕ್ಷ ರೂ. ಪತ್ತೆಯಾಗಿದೆ. ಎಲ್ಲಾ ನೋಟುಗಳು ಹೊಸದಾಗಿ ಮುದ್ರಣವಾದುದಾಗಿವೆ. ಕೆಲವುಗಳಲ್ಲಿ ಸಣ್ಣ ಡ್ಯಾಮೇಜ್ ಆಗಿದ್ದು, ತಿರಸ್ಕೃತವಾಗಿದ್ದವು. ವರ್ಮಾ ಹಿರಿಯ ಅಧಿಕಾರ ಸ್ಥಾನದಲ್ಲಿದ್ದು, ಅಧಿಕಾರಿಗಳನ್ನ ತಪಾಸಣೆ ಮಾಡಲಾಗುತ್ತಿರಲಿಲ್ಲ ಎಂದು ಸಿಐಎಸ್ಎಫ್ ಹೇಳಿದೆ.
ಇದೀಗ ಮತ್ತಷ್ಟು ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆ ಆರಂಭವಾಗಿದೆ. ಕ್ಲರ್ಕ್ ಆಗಿ ಕೆಲಸ ಆರಂಭಿಸಿದ್ದ ವರ್ಮಾ ಇತ್ತೀಚೆಗಷ್ಟೇ ನೋಟ್ ವೆರಿಫಿಕೇಷನ್ ಸಿಸ್ಟಮ್(ಎನ್ವಿಎಸ್) ನಲ್ಲಿ ಉಪ ಅಧಿಕಾರಿಯಾಗಿಯಾಗಿದ್ದರು. ವರ್ಮಾ ಕೃತ್ಯವನ್ನು ಬಯಲಿಗೆಳೆದ ಅಧಿಕಾರಿಗೆ ಬಹುಮಾನ ನೀಡಲಾಗ್ತಿದೆ ಎಂದು ಸಿಐಎಸ್ಎಫ್ ನಿರ್ದೇಶಕರಾದ ಓಪಿ ಸಿಂಗ್ ಹೇಳಿದ್ದಾರೆ.