ಭೋಪಾಲ್: ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಇದು ಕರ್ನಾಟಕ ಅಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಹೇಳಿದ್ದಾರೆ.
ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷಗಳನ್ನು ಒಡ್ಡುತ್ತಿರುವುದು ನಿಜ. ಬಿಜೆಪಿಯ ಮೊದಲ ಟಾರ್ಗೆಟ್ ಇದ್ದಿದ್ದು ಮಧ್ಯಪ್ರದೇಶ, ಕರ್ನಾಟಕ ಅಲ್ಲ. ಆದರೆ ಅವರಿಗೆ ಮಧ್ಯಪ್ರದೇಶದಲ್ಲಿ ಏನೂ ಮಾಡಲು ಆಗಲಿಲ್ಲ. ಆಗ ಅವರು ಕರ್ನಾಟಕಕ್ಕೆ ಹೋದರು ಎಂದು ಆಪರೇಷನ್ ಕಮಲ ಮೂಲಕ ಸರ್ಕಾರ ಬೀಳಿಸುವ ಬಿಜೆಪಿಯ ಯತ್ನಕ್ಕೆ ತಿರುಗೇಟು ನೀಡಿದ್ದಾರೆ.
ಮಸೂದೆವೊಂದರ ಮೇಲೆ ಮತದಾನದ ಸಂದರ್ಭದಲ್ಲಿ ನನ್ನ ಪಕ್ಷದ ಶಾಸಕರು ನನ್ನ ಬಳಿಗೆ ಬಂದು, ಬಿಜೆಪಿ ನಮಗೆ ದುಡ್ಡಿನ ಆಮಿಷ ಒಡ್ಡಿದೆ ಎಂದು ಹೇಳಿದ್ದರು. ಬಿಜೆಪಿಯಿಂದ ದುಡ್ಡು ತಗೊಳ್ಳಿ ಅಂತ ನಾನು ಹೇಳಿದೆ. ನನ್ನ ಪಕ್ಷದ ಶಾಸಕರೆಲ್ಲ ನನ್ನ ಜೊತೆಗಿದ್ದಾರೆ,.ಅಷ್ಟೇ ಅಲ್ಲದೇ ಬಿಜೆಪಿ ಇಬ್ಬರು ಶಾಸಕರೂ ಸರ್ಕಾರದ ಪರವಾಗಿ ವೋಟ್ ಹಾಕುವಂತೆ ನೋಡಿಕೊಂಡೆ ಎಂದು ಹೇಳುವ ಮೂಲಕ ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 115 ಬಿಜೆಪಿ 108 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಎಸ್ಪಿಯ ಇಬ್ಬರು, ಎಸ್ಪಿ ಒಬ್ಬರು, 4 ಮಂದಿ ಪಕ್ಷೇತರ ಶಾಸಕರು ಬೆಂಬಲ ನೀಡಿದ್ದರಿಂದ ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರ ರಚನೆಯಾಗಿದೆ.