ಚಾಮರಾಜನಗರ: ಒಂಟಿ ಸಲಗವೊಂದು ಕಳೆದ 5 ದಿನಗಳಿಂದ ದೇವರ ದರ್ಶನ ಮಾಡಿ ಪ್ರಸಾದ ಪಡೆದು ಹೋಗುತ್ತಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಜರುಗುತ್ತಿದೆ.
ಬೆಟ್ಟದಲ್ಲಿರುವ ಗೋಪಾಲಸ್ವಾಮಿ ದರ್ಶನ ಮಾಡಲು ಬಂಡಿಪುರ ರಾಷ್ಟ್ರೀಯ ಉದ್ಯಾನವನದಿಂದ 5 ದಿನಗಳಿಂದ ಪ್ರತಿ ದಿನ ಸಂಜೆ ಈ ಒಂಟಿ ಸಲಗ ಬೆಟ್ಟಕ್ಕೆ ಆಗಮಿಸುತ್ತಿದೆ. ದೇವರ ದರ್ಶನ ಪಡೆದ ನಂತರ ಒಂಟಿ ಸಲಗ ದೇವಸ್ಥಾನದ ಅಡುಗೆ ಮನೆಗೆ ಹೋಗಿ ಸೊಂಡಿಲಿನಿಂದ ಪ್ರಸಾದ ಸ್ವೀಕರಿಸಿ ಕಾಡಿಗೆ ತೆರಳುತ್ತಿದೆ. ಈ ದೃಶ್ಯವನ್ನು ಕಂಡ ಇಲ್ಲಿನ ಭಕ್ತರು ಹಾಗೂ ಜನರು ಗಣಪತಿಯೇ ಈ ಒಂಟಿ ಸಲಗ ರೂಪದಲ್ಲಿ ಬರುತ್ತಿದ್ದಾನೆ ಎನ್ನುತ್ತಿದ್ದಾರೆ.
ಸಾಮಾನ್ಯವಾಗಿ ದೊಡ್ಡ ದೇವಾಲಯಗಳಲ್ಲಿ ಸಾಕಾನೆಗಳಿರುತ್ತವೆ. ಈ ಆನೆಗಳು ದೇವರಿಗೆ ನಮಿಸುವುದು ರೂಢಿ. ಆ ಆನೆ ದೇವರ ದರ್ಶನ ಪಡೆಯುವ ಸಲುವಾಗಿ ಬರುತ್ತಿದೆ ಎನ್ನುವುದು ಕೆಲವರ ನಂಬಿಕೆ. ಆದರೆ, ಈ ಕಾಡಾನೆಗೆ ದೇವಾಲಯದಲ್ಲಿ ಸಿಗುತ್ತಿರುವ ಬಾಳೆಹಣ್ಣು, ತೆಂಗಿನಕಾಯಿ ರುಚಿ ಸಿಕ್ಕಿದೆ.
ಹೀಗಾಗಿ ನಿತ್ಯ ಆ ಆನೆ ಇಲ್ಲಿಗೆ ಬರುತ್ತಿದೆ ಎನ್ನುವುದು ಕೆಲವರ ವಾದ. ಆದರೆ ಈ ಭಾರೀ ಗಾತ್ರದ ಒಂಟಿ ಸಲಗ ದೇವಾಲಯದ ಬಳಿಗೆ ಬಂದರೂ ಯಾರಿಗೂ ತೊಂದರೆ ಕೊಟ್ಟಿಲ್ಲ. ಹೀಗಾಗಿ ಇದು ಗೋಪಾಲಸ್ವಾಮಿ ಅನುಗ್ರಹದಿಂದಲೇ ಆನೆ ಬರುತ್ತಿದೆ ಎನ್ನುವುದು ದೇವಸ್ಥಾನದ ಅರ್ಚಕರ ನಂಬಿಕೆ. ಏನೇ ಇರಲಿ ಆನೆ ನಿತ್ಯ ದರ್ಶನ ಪಡೆದು ಹೋಗುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿರುವುದಂತೂ ಸುಳ್ಳಲ್ಲ.