ರಾಯಚೂರು: ಇಡೀ ರಾಜ್ಯದ ಜನರೆಲ್ಲಾ `ಕಾವೇರಿ ಬದುಕಿ ಬಾ’ ಅಂತ ಹೇಗೆ ಪ್ರಾರ್ಥನೆ ಮಾಡಿದ್ದಾರೋ, 2007ರ ಏಪ್ರಿಲ್ 24 ರಂದು ಕೂಡ `ಸಂದೀಪ್ ಬದುಕಿ ಬಾ’ ಅಂತ ಪ್ರಾರ್ಥಿಸಿದ್ದರು.
ಹೌದು. ರಾಯಚೂರಿನ ಮಾನ್ವಿ ತಾಲೂಕಿನ ನೀರಮಾನ್ವಿಯಲ್ಲಿ ಯಮಸ್ಪರೂಪಿಯಾಗಿ ಬಾಯಿ ತೆರೆದ ಕೊಳವೆ ಬಾವಿ ಬಾಲಕ ಸಂದೀಪ್ನನ್ನ ಬಲಿ ಪಡೆದಿತ್ತು. ಆ ಘಟನೆ ನಡೆದು ಇಂದಿಗೆ ಬರೊಬ್ಬರಿ ಹತ್ತು ವರ್ಷಗಳೇ ಕಳೆದಿದೆ. ನತದೃಷ್ಠ ಬಾಲಕ ಸಂದೀಪ್ ಈಗ ನೆನಪು ಮಾತ್ರ.
ಅಂದು ನಡೆದಿದ್ದೇನು?: ಗ್ರಾಮದ ಗೋಪಾಲ ಎಂಬುವವರ ಜಮೀನಿನಲ್ಲಿ ಟಿಲ್ಲರ್ ಹೊಡೆಯುತ್ತಿದ್ದಾಗ, ಆಟವಾಡಲು ಹೋಗಿ ನೀರು ಬಾರದೆ ಬಿಟ್ಟಿದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. ಎರಡನೇ ತರಗತಿ ಪಾಸಾಗಿದ್ದ 9 ವರ್ಷದ ಸಂದೀಪ್ನ ಸಾವು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಸಂದೀಪನ ತಂದೆ ನಾಗರಾಜ್ ಹಾಗೂ ತಾಯಿ ಲಕ್ಷ್ಮಿಗೆ ಈ ಘಟನೆಯಿಂದ ಬರಸಿಡಿಲು ಬಡಿದಂತಾಗಿತ್ತು.
ಅಂದು ಕೊಳವೆ ಬಾವಿಗೆ ಬಿದ್ದ ಸಂದೀಪನನ್ನ ಕಾಪಾಡಲು ಅಗ್ನಿ ಶಾಮಕ ದಳ, ಹಟ್ಟಿ ಚಿನ್ನದ ಗಣಿ ಕಂಪನಿ ರಕ್ಷಣಾ ತಂಡ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಸತತ ಮೂರು ದಿನಗಳ ಪ್ರಯತ್ನದ ಬಳಿಕ ಏಪ್ರಿಲ್ 26 ರಂದು ಸಂದೀಪನ ಶವವನ್ನ ಹೊರತೆಗೆಯಲಾಗಿತ್ತು. ಸಂದೀಪ್ ಪ್ರಕರಣ ನಡೆದು ಇಂದಿಗೆ ಬರೋಬ್ಬರಿ ಹತ್ತು ವರ್ಷ ಕಳೆದಿದೆ. ಸಂದೀಪನನ್ನ ನೆನೆದು ಈಗಲೂ ಕಣ್ಣಲ್ಲಿ ನೀರನ್ನ ತುಂಬಿಕೊಳ್ಳುವ ಬಾಲಕನ ತಂದೆತಾಯಿಯಾದ ನಾಗರಾಜ್ ಲಕ್ಷ್ಮಿ ದಂಪತಿ ಕಾವೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಂದೀಪನ ದುರಂತ ಸಾವಿನ ಘಟನೆ ನಡೆದು ಹತ್ತು ವರ್ಷ ಕಳೆದರು ತೆರೆದ ಕೊಳವೆ ಬಾವಿಗಳು ಈಗಲೂ ಯಮಸ್ವರೂಪಿಗಳಾಗಿ ಜೀವವಂತವಾಗಿರುವುದು ನಿಜಕ್ಕೂ ದುರಂತವೇ ಸರಿ.