ಚಿತ್ರದುರ್ಗ: ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಈ ಸಚಿವ ಸಂಪುಟ ಬೆಳಗಾವಿ ಹಾಗೂ ಬೆಂಗಳೂರಿಗೆ ಸೀಮಿತವಾಗಿದೆ, ಮಧ್ಯಕರ್ನಾಟಕ್ಕೆ ಅನ್ಯಾಯ ಆಗಿದೆ ಎಂದು ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿದ್ದರೂ ನಾನು ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಅಲ್ಲದೇ ಪಕ್ಷದ ವಿರುದ್ಧ ರೆಬೆಲ್ ಆಗಿ ವರ್ತಿಸಿಲ್ಲ. ಆದರೆ ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದು ಚಿತ್ರದುರ್ಗದಲ್ಲಿ ಶೂನ್ಯ ಸ್ಥಿತಿಯಲ್ಲಿದ್ದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಗ್ರಾಮ ಪಂಚಾಯ್ತಿ ಹಾಗೂ ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದ್ದೇನೆ ಎಂದು ತಾವು ಪಕ್ಷಕ್ಕಾಗಿ ಶ್ರಮ ಪಟ್ಟ ಬಗ್ಗೆ ತಿಪ್ಪಾರೆಡ್ಡಿ ತಿಳಿಸಿದರು.
6 ಬಾರಿ ಶಾಸಕರಾಗಿರುವ ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ ಸೋತವರಿಗೆ ಹಾಗೂ ಆಕಾಂಕ್ಷೆ ಇಲ್ಲದವರಿಗೆ ಸಚಿವ ಸ್ಥಾನ ಕಲ್ಪಿಸಲಾಗಿದ್ದು, ಹಿರಿಯ ಸಚಿವರಿಗೆ ಮತ್ತೆ ಮುಂದುವರಿಸಿದ್ದಾರೆ. ಅದರ ಬದಲು ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ನಮ್ಮಂತಹ ಹಿರಿಯ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕಿತ್ತು ಎಂದು ಹೇಳಿದರು.
ಈ ನಿಟ್ಟಿನಲ್ಲಿ ಹೈಕಮಾಂಡ್ ಹಾಗೂ ಸಿಎಂ ಬಿಎಸ್ವೈ ಮುಂಬರುವ ದಿನಗಳಲ್ಲಿ ಸಚಿವ ಸ್ಥಾನ ಕಲ್ಪಿಸುವ ಭರವಸೆ ಇದೆ. ಹೀಗಾಗಿ ಕಾದು ನೋಡುತ್ತೇನೆ ಹೊರತು ಯಾವುದೇ ಕಾರಣಕ್ಕೂ ನಾನು ಪಕ್ಷಕ್ಕೆ ದ್ರೋಹ ಮಾಡಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲವೆಂದು ಸ್ಪಷ್ಟಪಸಿದರು.