ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡಿ ನೇಪಾಳಕ್ಕೆ ಚಿನ್ನಾಭರಣ ಸಾಗಿಸ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೋವಿಂದ ಸಿಂಗ್ ಮತ್ತು ವಿಜಯ್ ಸಿಂಗ್ ಬಂಧಿತ ಆರೋಪಿಗಳು. ಐದು ಕೆಜಿಗೂ ಹೆಚ್ಚಿನ ಚಿನ್ನವನ್ನ ನೇಪಾಳಕ್ಕೆ ರವಾನೆ ಮಾಡಿದ್ದ ನೇಪಾಳದ ಈ ಖತರ್ನಾಕ್ ಕಳ್ಳರನ್ನ ಪೊಲೀಸರು ಬಂಧಿಸಿದ್ದಾರೆ.
ಓಲಾ ಕ್ಯಾಬ್ ನಲ್ಲಿ ಬಂದು ಕಳ್ಳತನ ಮಾಡ್ತಿದ್ದ ಗ್ಯಾಂಗ್: ಗೋವಿಂದ್ ಸಿಂಗ್ ರಾತ್ರಿ ವೇಳೆ ಒಲಾ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಹಗಲು ವೇಳೆ ತಾಜ್ ವಿವಾಂತ ಹೋಟೆಲ್ ನಲ್ಲಿ ಕಾರು ಓಡಿಸುತ್ತಿದ್ದ. ಹಗಲು ವೇಳೆಯಲ್ಲಿ ಗೋವಿಂದ್ ಸಿಂಗ್ ಖಾಲಿ ಮನೆಗಳನ್ನು ಪತ್ತೆ ಮಾಡುತ್ತಿದ್ದ. ನಂತರ ರಾತ್ರಿ ಇಬ್ಬರು ಖದೀಮರು ಸೇರಿ ಕಳ್ಳತನ ಮಾಡ್ತಿದ್ರು. ಓಲಾದಲ್ಲಿ ತಾವೇ ಬುಕಿಂಗ್ ಮಾಡಿಕೊಂಡು ಈ ಖದೀಮರು ಕಳ್ಳತನಕ್ಕೆ ಹೋಗುತ್ತಿದ್ರು.
ವಿಜಯ್ ಸಿಂಗ್ ಕದಿಯುವವರೆಗೂ ಗೋವಿಂದ್ ಸಿಂಗ್ ಕಾರ್ ನಲ್ಲೇ ಕಾದು ಕೂರುತ್ತಿದ್ದ. ಕಳ್ಳತನ ಮಾಡುವ ಸಮಯದಲ್ಲಿ ಪೊಲೀಸರು ಕೇಳಿದ್ರೆ ಒಲಾ ಬುಕ್ಕಿಂಗ್ ಆಗಿದೆ ಕಸ್ಟಮರ್ಗಾಗಿ ಕಾಯುತ್ತಿದ್ದೇವೆ ಎನ್ನುತ್ತಿದ್ದ ಈ ಕಳ್ಳ. ನಂತರ ಅದೇ ಓಲಾದಲ್ಲಿ ಚಿನ್ನಾಭರಣ ಸಾಗಾಟ ಮಾಡ್ತಿದ್ದರು.
ಆರೋಪಿಗಳು ಸುಮಾರು ಐದು ಕೆಜಿಯಷ್ಟು ಚಿನ್ನ ಕಳ್ಳತನ ಮಾಡಿದ್ದಾರೆ. ಈ ಗ್ಯಾಂಗ್ ಮೇಲೆ ಸುಮಾರು ಮುವತ್ತು ಪ್ರಕರಣಗಳಿವೆ. ಗೋವಿಂದ್ ಸಿಂಗ್ ಮೇಲೆ 2009ರಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆ ಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. 2009ರಿಂದ ಇಲ್ಲಿಯವರೆಗೆ ಈ ಖದೀಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಸದ್ಯ ಈ ಗ್ಯಾಂಗ್ನ ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಈ ಕಳ್ಳರು ಸಾಕಷ್ಟು ಚಿನ್ನವನ್ನು ನೇಪಾಳಕ್ಕೆ ಸಾಗಿಸಿದ್ದು, ಸದ್ಯ ಪೊಲೀಸರು ಒಂದೂವರೆ ಕೆಜಿಯಷ್ಟು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಜೆಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.