ಬೆಂಗಳೂರು: ಒಂದು ಕಾರಿನಲ್ಲಿ ಬಂದು ಮತ್ತೊಂದು ಕಾರನ್ನ ಖದೀಮರು ಕದ್ದೊಯ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಹಿಪ್ಪೆ ಆಂಜನೇಯ ಬಡಾವಣೆಯಲ್ಲಿ ನಡೆದಿದೆ.
ಚಾಣಾಕ್ಷತನದಿಂದ ಕಾರು ಕಳ್ಳತನ ಮಾಡಿದ ಖತರ್ನಾಕ್ ಕಳ್ಳರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ 2 ಗಂಟೆ ವೇಳೆಗೆ ಹಿಪ್ಪೆ ಆಂಜನೇಯ ಬಡಾವಣೆಯ 4ನೇ ಕ್ರಾಸ್ನ ನಿವಾಸಿ ದೀಪಕ್ ಅವರ ಮನೆ ಮುಂದೆ ನಿಲ್ಲಿಸಿದ್ದ 14 ಲಕ್ಷ ರೂ. ಮೌಲ್ಯದ ಕಾರನ್ನು ಕಳ್ಳರು ಕದ್ದಿದ್ದಾರೆ. ಒಂದು ಕಾರಿನಲ್ಲಿ ಬಂದ ಕಳ್ಳರು ಬ್ರೀಜಾ ಕಾರನ್ನು ಕದ್ದೊಯ್ದು ತಮ್ಮ ಕೈಚಳಕ ತೋರಿದ್ದಾರೆ.
ಮನೆಯ ಮುಂದೆ ನಿಂತಿದ್ದ ಕಾರು ಕಳ್ಳತನವಾಗಿರುವುದು ಮನೆಯವರು ಹಾಗೂ ಸುತ್ತ ಮುತ್ತಲಿನ ಬಡಾವಣೆಯವರಲ್ಲಿ ಆತಂಕ ಸೃಷ್ಟಿಸಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಕಾರು ಮಾಲೀಕರು ದೂರು ನೀಡಿದ್ದಾರೆ.