ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ರೈತರ ಹೆಸರಲ್ಲಿ ಕಳ್ಳರಿಬ್ಬರು ಬ್ಯಾಂಕ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ನವಲಗುಂದ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕೀಲಿಯನ್ನು ಮುರಿದು ಬ್ಯಾಂಕ್ ಒಳಗಡೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಭಯಭೀತರಾಗಿ ಕಾಲ್ಕಿತ್ತಿದ್ದಾರೆ.
ಬ್ಯಾಂಕ್ ಮುಂಭಾಗದಲ್ಲಿ ಎರಡು ಬ್ಯಾಗ್ಗಳು ಪತ್ತೆಯಾಗಿವೆ. ಬ್ಯಾಗ್ನಲ್ಲಿ ಸುತ್ತಿಗೆ ಹಾಗೂ ಒಂದು ಭಿತ್ತಿಪತ್ರ ದೊರಕಿದ್ದು, ಅದರಲ್ಲಿ ರೈತರ ಸಾಲಮನ್ನಾ ಎಲ್ಲಿವರೆಗೂ ಮಾಡಲ್ಲ, ಅಲ್ಲಿಯವರೆಗೂ ನಾವು ಕಳ್ಳತನ ಮಾಡ್ತೀವಿ ಎಂದು ಬರೆಯಲಾಗಿದೆ.
ಬ್ಯಾಂಕ್ ಮುಂಭಾಗದ ಒಂದು ಸಿಸಿಟಿವಿಯನ್ನು ಕದ್ದಿದ್ದು, ಇನ್ನೊಂದನ್ನು ಮುರಿದು ಹೋಗಿದ್ದಾರೆ. ಕಳ್ಳರು ರೈತರ ಹೆಸರಿನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.