ಬೆಂಗಳೂರು: ಮಗನ ಶಾಲೆಯ ಶುಲ್ಕ ಕಟ್ಟಲು ಸ್ಕೂಟಿ ಡಿಕ್ಕಿಯಲ್ಲಿ ಬ್ಯಾಂಕ್ನಿಂದ ಡ್ರಾ ಮಾಡಿಟ್ಟಿದ್ದ ಹಣವನ್ನು ಖತರ್ನಾಕ್ ಕಳ್ಳರು ಕದ್ದಿರುವ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಭಟ್ಟರಹಳ್ಳಿಯ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಶ್ರೀನಾಥ್ ಅವರ ಆವಲಹಳ್ಳಿಯ ಬ್ಯಾಂಕ್ ಆಫ್ ಇಂಡಿಯಾದಲ್ಲಿ 48 ಸಾವಿರ ಹಣ ಡ್ರಾ ಮಾಡಿದ್ದರು. ಮಗನ ಸ್ಕೂಲ್ ಅಡ್ಮಿಶನ್ ಫೀಜ್, ಬುಕ್ಸ್ಗಾಗಿ ಹಣವನ್ನು ಡ್ರಾ ಮಾಡಿಕೊಂಡು ಬಂದಿದ್ದರು. ಹಾಗೆಯೇ ಬ್ಯಾಂಕ್ನಿಂದ ಬರುವಾಗ ದಾರಿ ಮಧ್ಯೆ ಮಧ್ಯಾಹ್ನ ಪತ್ನಿ ಹಾಗೂ ಮಗನೊಂದಿಗೆ ಊಟ ಮಾಡಲು ಶ್ರೀನಾಥ್ ಹೋಟೆಲ್ ಗೆ ತೆರಳಿದ್ದಾರೆ. ಈ ವೇಳೆ ಡ್ರಾ ಮಾಡಿದ ಹಣವನ್ನ ತಮ್ಮ ಆಕ್ಟೀವಾ ಸ್ಕೂಟಿಯ ಡಿಕ್ಕಿಯಲ್ಲಿ ಇಟ್ಟು ಊಟಕ್ಕೆ ಹೋದಾಗ, ಕಳ್ಳರು ಹಣವನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ಊಟ ಮಾಡಿ ಬಂದ ನಂತರ ಡಿಕ್ಕಿಯಲ್ಲಿಟ್ಟಿದ್ದ ಹಣ ಕಾಣದಿದ್ದಾಗ ದಂಪತಿ ಕಂಗಾಲಾಗಿದ್ದಾರೆ. ಅಲ್ಲದೆ ಕಳ್ಳರ ಕೃತ್ಯದಿಂದ ಮಗನ ಅಡ್ಮಿಶನ್ ಫೀಜ್ ಕಟ್ಟಲಾಗದೇ ದಂಪತಿ ಕಣ್ಣಿರಿಡುತ್ತಿದ್ದಾರೆ. ಶ್ರೀನಾಥ್ ಅವರು ಹಣ ಡ್ರಾ ಮಾಡಿಕೊಂಡು ಬರಿವಾಗ ಆವಲಹಳ್ಳಿಯ ಬ್ಯಾಂಕಿನಿಂದಲೂ ಕಳ್ಳರು ಅವರನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಸುಮಾರು 2 ಕಿಲೋಮೀಟರ್ ಫಾಲೋ ಮಾಡಿ, ಅವರು ಊಟಕ್ಕೆ ತೆರಳಿದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸ್ಕೂಟಿ ಡಿಕ್ಕಿಯಿಂದ ಹಣವನ್ನು ಕಳ್ಳರು ಕದಿಯುತ್ತಿರುವ ಸಂಪೂರ್ಣ ದೃಶ್ಯಾವಳಿಗಳು ಹೋಟೆಲ್ ಪಾರ್ಕಿಂಗ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂದ ದಂಪತಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
https://www.youtube.com/watch?v=DKGsnEBTneo