ತುಮಕೂರು: ದೇವಾಲಯಗಳಿಂದ ಹುಂಡಿ ಕಳ್ಳತವಾಗುವಂತಹ ಪ್ರಕರಣಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇಲ್ಲೊಂದು ಕದ್ದ ಹುಂಡಿಯನ್ನು ವಾಪಸ್ ತಂದಿಟ್ಟಿರುವ ಘಟನೆಯೊಂದು ನಡೆದಿದೆ.
ಕುಣಿಗಲ್ ತಾಲೂಕು ರಂಗಸ್ವಾಮಿ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದ ಎರಡು ಹುಂಡಿಗಳನ್ನು ಕಳ್ಳರು ಕದ್ದಿದ್ದರು. ಆದರೆ ಕದ್ದಿದ್ದ ಹುಂಡಿಗಳನ್ನು ದೇವರು ಮತ್ತು ಪೊಲೀಸರ ಭಯಕ್ಕೆ ಕಳ್ಳರು ಸೋಮವಾರ ವಾಪಸ್ ತಂದಿಟ್ಟಿದ್ದಾರೆ.
ರಂಗಸ್ವಾಮಿ ಬೆಟ್ಟದ ಮೇಲಿರುವ ರಂಗನಾಥ ಸ್ವಾಮಿ ದೇವಾಲಯಕ್ಕೆ ಸೇರಿದ್ದ 2 ಹುಂಡಿಗಳನ್ನು ಕಳ್ಳರು ಶನಿವಾರ ರಾತ್ರಿ ಕಳವು ಮಾಡಿದ್ದರು. ಸುಮಾರು 2 ಲಕ್ಷ ರೂ. ಹಣವಿದ್ದ ಹುಂಡಿ ಕಳುವಾಗಿರುವ ಬಗ್ಗೆ ದೇವಾಲಯದ ಧರ್ಮದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಿದ್ದಗಂಗಾ ಶ್ರೀ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಆದರೆ ಸೋಮವಾರ ಕಳುವಾಗಿದ್ದ ಹುಂಡಿಗಳು ದೇವಾಲಯದ ಬಳಿ ಪ್ರತ್ಯಕ್ಷವಾಗಿದೆ. ಇದನ್ನೂ ಓದಿ: ತಾಲಿಬಾನ್ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ಗೆ ದೂರು ಕೊಟ್ಟ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಪೋಷಕರು
ಕಳ್ಳರು ಹುಂಡಿಯನ್ನು ಕದ್ದುಕೊಂಡು ಹೋಗಿದ್ದರೂ ಅದರ ಬೀಗ ತೆಗೆಯದೇ ಯಥಾಸ್ಥಿತಿಯಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಹುಂಡಿಗಳನ್ನು ವಶಕ್ಕೆ ಪಡೆದಿದ್ದಾರೆ.