ಜೈಪುರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ಅಡುಗೆ ಎಣ್ಣೆದರ, ಅಡುಗೆ ಅನಿಲದರವೂ ಏರಿಕೆಯಾಯಿತು. ನಂತರ ಈರುಳ್ಳಿ ಬೆಲೆ ಜನರ ಕಣ್ಣಲ್ಲಿ ನೀರು ತರಿಸಿತ್ತು. ಆದರೀಗ ನಿಂಬೆ ಹಣ್ಣು ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ದೇಶದಲ್ಲಿ ನಿಂಬೆಹಣ್ಣಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಚಿನ್ನ, ಬೆಳ್ಳಿ ಇತರ ಬೆಲೆ ಬಾಳುವ ಆಭರಣಗಳ ಮೇಲೆ ಬೀರುತ್ತಿದ್ದ ಕಳ್ಳರ ದೃಷ್ಟಿಯೂ ನಿಂಬೆಹಣ್ಣಿನತ್ತ ಆಯುತ್ತಿದೆ. ಜೈಪುರದ ಮುಹನಾ ಮಂಡಿಯಲ್ಲಿ ಕಳ್ಳನೋರ್ವ ನಿಂಬೆಹಣ್ಣು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಇದಕ್ಕೆ ಸಾಕ್ಷಿಯಾಗಿದ್ದು, ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್
ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ನಿಂಬೆ ಹಣ್ಣು 400 ರೂ.ಗೆ ಮಾರಾಟವಾಗುತ್ತಿದ್ದು, ಕಳ್ಳನೋರ್ವ 50 ಕೆಜಿ ನಿಂಬೆ ಕದ್ದು ಪರಾರಿಯಾಗಿದ್ದಾನೆ. ರಿಕ್ಷಾದಲ್ಲಿ ಬಂದಿರುವ ಆರೋಪಿ ನಿಂಬೆ ಹಣ್ಣು ತುಂಬಿರುವ ಬಾಕ್ಸ್ ಅನ್ನು ಅದರಲ್ಲಿಟ್ಟುಕೊಂಡು ಪರಾರಿಯಾಗಿದ್ದಾನೆ. ಜೈಪುರದ ಮುಹನಾ ಮಂಡಿಯಲ್ಲಿರುವ ಗೋದಾಮಿನಿಂದ ಎರಡು ಬಾರಿ ನಿಂಬೆಹಣ್ಣನ್ನು ಕಳವು ಮಾಡಲಾಗಿದೆ. ಈ ಕಳ್ಳತನ ನಡೆದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಶೋಧಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಂದುಜ್ಹ್ ಮಸೀದಿ ಮೇಲೆ ಬಾಂಬ್ ದಾಳಿ- 10ಕ್ಕೂ ಹೆಚ್ಚು ಮಂದಿ ದಾರುಣ ಸಾವು
ಘಟನೆಗೆ ಸಂಬಂಧಿಸಿದಂತೆ ಜೈಪುರ ಮುಹಾನ ಮಂಡಿ ಒಕ್ಕೂಟದ ಅಧ್ಯಕ್ಷ ರಾಹುಲ್ ತನ್ವರ್ ಮಾತನಾಡಿ, ನಿಂಬೆ ವ್ಯಾಪಾರಿ ದೀಪಕ್ ಶರ್ಮಾ ಅವರ ಗೋದಾಮಿನಲ್ಲಿ ಎರಡು ನಿಂಬೆ ಕಳ್ಳತನದ ಘಟನೆಗಳು ನಡೆದಿವೆ. ಏ.12ರಲ್ಲಿ ಮೊದಲಬಾರಿಗೆ ಕಳ್ಳತನ ನಡೆದಿತ್ತು. ಇದೀಗ 2ನೇ ಬಾರಿಗೆ ಕಳ್ಳತನ ನಡೆದಿದೆ. ಗ್ರಾಹಕರಂತೆ ನಿಂಬೆಹಣ್ಣು ಖರೀದಿಸಲು ಬಂದವರು, ದರ ಕುದುರಲಿಲ್ಲವೆಂದು ನಿಂಬೆಹಣ್ಣಿನ ಬಾಕ್ಸ್ ಅನ್ನೇ ಕದ್ದು ಒಯ್ದಿದ್ದಾರೆ ಎಂದು ದೂರಿದ್ದಾರೆ.