– ಸಿಸಿಟಿವಿಯಲ್ಲಿ ಸೆರೆಯಾಯ್ತು ವಿಚಿತ್ರ ಕಳ್ಳರ ದೃಶ್ಯ
ತುಮಕೂರು: ಅರೆ ಬೆತ್ತಲೆಯಾಗಿ ಸೊಂಟಕ್ಕೆ ಕಲ್ಲುಗಳು ತುಂಬಿರುವ ಬಟ್ಟೆಕಟ್ಟಿಕೊಂಡು ವಿಚಿತ್ರ ವೇಷದಲ್ಲಿ ಬಂದ ಕಳ್ಳರ ಗುಂಪೊಂದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕು ಹುಲಿಯೂರುದುರ್ಗದಲ್ಲಿ ನಡೆದಿದೆ.
ಹುಲಿಯೂರು ದುರ್ಗದ ಶೃಂಗಾರ ಸಾಗರ ಬಡಾವಣೆಯಲ್ಲಿರುವ ನಿವೃತ್ತ ಶಿಕ್ಷಕಿ ಸಾವಿತ್ರಿ ಭಟ್ ಮನೆ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಗುರುವಾರ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದು, ವಿಚಿತ್ರ ವೇಷದಲ್ಲಿ ಬರುವ ಕಳ್ಳರ ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳರ ವಿಚಿತ್ರ ವೇಷ ನೋಡುವವರಿಗೆ ಭಯ ಹುಟ್ಟಿಸುವ ಆಗಿದ್ದು, ಅರೆಬೆತ್ತಲೆಯಾಗಿ ಮನೆಯ ಬಳಿ ಸಾವಿತ್ರಿ ಅವರ ಮನೆಯೊಳಗೆ ಮೂವರು ಪ್ರವೇಶ ಮಾಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಮನೆಯ ಬೀರು ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಬೀರು ತೆರೆಯಲು ಕಳ್ಳರು ವಿಫಲರಾಗಿದ್ದು, ಬೀರು ಮೇಲಿದ್ದ ಸುಮಾರು ಐದು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಕಳ್ಳತನಕ್ಕೆ ಯತ್ನಿಸಿದ ವೇಳೆ ಶಿಕ್ಷಕಿ ಸಾವಿತ್ರಿ ಅವರ ಮನೆಯಲ್ಲಿ ಯಾರು ಇರಲಿಲ್ಲ. ಇದನ್ನೇ ಅನುಕೂಲ ಮಾಡಿಕೊಂಡು ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಕಳ್ಳರು ಕೃತ್ಯ ಎಸಗುವ ವೇಳೆ ಯಾರಾದರು ತಮ್ಮನ್ನು ನೋಡಿದರೆ ಅವರ ಮೇಲೆ ದಾಳಿ ನಡೆಸಲು ಈ ಉಪಾಯ ಬಳಸಿದ್ದಾರೆ.
ಘಟನೆ ಕುರಿತು ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews