ಬೆಂಗಳೂರು: ಸಾಮೂಹಿಕ ವಿವಾಹ ನೆರವೇರುತ್ತಿದ್ದ ಸಂದರ್ಭದಲ್ಲಿ ಗಟ್ಟಿಮೇಳದ ವೇಳೆ ತಾಳಿ ನಾಪತ್ತೆಯಾಗಿ, ವಧು-ವರರು ಗಲಿಬಿಲಿಯಾದ ಘಟನೆ ನೆಲಮಂಗಲ ಸಮೀಪದ ಕಾಚೋಹಳ್ಳಿ ಕಲ್ಯಾಣ ಮಂಟಪದಲ್ಲಿ ಇಂದು ನಡೆದಿದೆ.
ಪಟ್ಟನಾಯಕನಹಳ್ಳಿ ನಂಜಾವದೂತ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಶುಭಕಾರ್ಯ ನಡೆಯುತ್ತಿತ್ತು. ಈ ಶುಭಸಮಾರಂಭದಲ್ಲಿ ಅಡಮಾರನಹಳ್ಳಿ ಗ್ರಾಮಸ್ಥರು 15 ಜೋಡಿಗಳ ಮದುವೆ ಮಾಡಿಸುತ್ತಿದ್ದರು. ಆದರೆ ಈ ಖುಷಿ ನಡುವೆ ಕಳ್ಳನೊಬ್ಬ ತಾಳಿಯನ್ನೇ ಕದ್ದು ಪರಾರಿ ಆಗಿದ್ದಾನೆ.
ಕಳೆದ ನಾಲ್ಕು ವರ್ಷದಿಂದ ಗ್ರಾಮಸ್ಥರು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಹಿಂದೆಂದು ಈ ರೀತಿ ಆಗಿರಲಿಲ್ಲ. ಆದರೆ ಮದುವೆ ಸಮಾರಂಭದಲ್ಲಿ ಎಲ್ಲರೂ ಬ್ಯುಸಿಯಾಗಿರುವಾಗ ಕ್ಷಣಾರ್ಧದಲ್ಲಿ ತಾಳಿ ಕದ್ದು ಕಲ್ಯಾಣ ಮಂಟಪದಿಂದ ಕಳ್ಳ ನಾಪತ್ತೆಯಾಗಿದ್ದಾನೆ. ಚಾಲಕಿ ಕಳ್ಳ ತನ್ನ ಕೈಚಳಕ ತೋರಿದ್ದು, ಶುಭ ಸಮಾರಂಭದಲ್ಲಿ ಹೀಗಾಯ್ತಲ್ಲಾ ಎಂದು ಕುಟುಂಬಸ್ಥರು ಹಾಗೂ ಸ್ಥಳದಲ್ಲಿದ್ದವರು ತಳಮಳಗೊಂಡಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.