ಭುವನೇಶ್ವರ: ಕಳ್ಳನೊಬ್ಬ ದೇಗುಲದಿಂದ ಆಭರಣ (Ornaments) ಗಳನ್ನು ಕದ್ದು ಬರೋಬ್ಬರಿ 9 ವರ್ಷಗಳ ಬಳಿಕ ಅದನ್ನು ವಾಪಸ್ ಮಾಡಿದ ಪ್ರಸಂಗವೊಂದು ಭುವನೇಶ್ವರದ ಹೊರವಲಯದಲ್ಲಿರುವ ಗೋಪಿನಾಥಪುರದಲ್ಲಿ ನಡೆದಿದೆ.
ಹೌದು. ಕಳ್ಳನೊಬ್ಬ ದೇವಸ್ಥಾನದಿಂದ ಕೆಲವು ಆಭರಣಗಳನ್ನು ಕದಿದ್ದನು. ಇದಾದ 9 ವರ್ಷಗಳ ನಂತರ ಇದೀಗ ಆತ ಕದ್ದ ಮಾಲನ್ನು ಹಿಂದಿರುಗಿಸಿದ್ದಾನೆ. ಈ ಘಟನೆಯ ನಂತರ ಇದೀಗ ದೇಗುಲದ ಸ್ಥಳೀಯ ನಿವಾಸಿಗಳಲ್ಲಿ ದೇವರ ಮೇಲಿದ್ದ ಭಕ್ತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಕಳ್ಳನು ದೇವಾಲಯದ ಅರ್ಚಕನಿಗೆ 200 ರೂಪಾಯಿಯ ದಕ್ಷಿಣೆ (ದೇಣಿಗೆ) ಮತ್ತು ಮಾಡಿದ ತಪ್ಪಿಗೆ ದಂಡವಾಗಿ 100 ರೂಪಾಯಿಯನ್ನು ಸಹ ಬಿಟ್ಟು ಹೋಗಿದ್ದಾನೆ.
ವರದಿಗಳ ಪ್ರಕಾರ, 2014 ರಲ್ಲಿ ಗೋಪಿನಾಥಪುರ ದೇವಸ್ಥಾನದಲ್ಲಿ ಕಳ್ಳತನವಾಗಿತ್ತು. ಯಜ್ಞದ ವೇಳೆ ಅರ್ಚಕರು ಸಮೀಪದ ದೇವಸ್ಥಾನಕ್ಕೆ ಹೋಗಿದ್ದಾಗ ಕಳ್ಳರು ರಾಧಾ-ಕೃಷ್ಣರ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದರು ಎಂದು ಸ್ಥಳೀಯ ನಿವಾಸಿ ಶಶಿಭೂಷಣ ಮೊಹಾಂತಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದು ಹತ್ಯೆ
ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ಇತ್ತ ಎಲ್ಲಾ ಕಡೆ ಹುಡುಕಿದರೂ ಗ್ರಾಮಸ್ಥರಿಗೆ ಕಳ್ಳನ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೆ ಕಳ್ಳತನವಾದ ಆಭರಣಗಳು ಕೂಡ ಪತ್ತೆಯಾಗಲಿಲ್ಲ. ಹೀಗಾಗಿ ಕಳವಾದ ಸೊತ್ತನ್ನು ಮರಳಿ ಪಡೆದೇ ಪಡೆಯುತ್ತೇವೆ ಎಂದು ಗ್ರಾಮದ ಜನ ನಂಬಿದ್ದರು. ಇದೀಗ ದೇಗುಲದ ಆಭರಣಗಳನ್ನು ವಾಪಸ್ ಪಡೆದಿರುವುದು ಪವಾಡ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.